ಕೋಮು ಸೌಹಾರ್ದತೆಗೆ ಉದಾಹರಣೆಯಾದ ಮತ್ತೊಂದು ಘಟನೆ ನಡೆದಿದೆ. ಮುಸ್ಲಿಂ ಯುವಕರು ಮಂಗಳವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ.
ಯೂತ್ ವೆಲ್ಫೇರ್ ಎಪಿ ಸಂಘಟನೆಯ ಯುವಕರು ಸೀತಾರಾಮನಗರದ ರಾಮಾಲಯದಲ್ಲಿ ಅಯ್ಯಪ್ಪ ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು.
ಅಯ್ಯಪ್ಪ ದೀಕ್ಷೆಯೊಂದಿಗೆ ವ್ರತಾಚರಣೆ ಮಾಡುತ್ತಿರುವ ಅಯ್ಯಪ್ಪ ಭಕ್ತರಿಗೆ ಯುವ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಸಂರಕ್ಷಣಾ ಮಂಡಳಿಯ ರಾಜ್ಯಾಧ್ಯಕ್ಷ ಶಾರುಖ್ ಶಿಬ್ಲಿ ಮತ್ತು ಸದಸ್ಯರಾದ ಜಹೀರ್ ಮತ್ತು ಅಬು ನಾಸರ್ ಅವರು ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಧರ್ಮವು ಮನೆಗಳಿಗೆ ಸೀಮಿತವಾಗಿರಬೇಕು ಎಂದು ಹೇಳಿದ ಶಾರುಖ್ ಸಂಗಡಿಗರೊಂದಿಗೆ ದಿನವಿಡೀ ಅಯ್ಯಪ್ಪನ ಭಕ್ತರಿಗೆ ಊಟ ಬಡಿಸಿದರು. ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.