ಯಾದಗಿರಿ: ರಾಜ್ಯದಲ್ಲಿ ಸರ್ಕಾರಿ ಜಮೀನು ಗುರುತಿಸಲು ಬೀಟ್ ಆ್ಯಪ್ ಅಭಿವೃದ್ಧಿಸಲಾಗುತ್ತಿದೆ. ಈ ಆ್ಯಪ್ ಶೀಘ್ರದಲ್ಲೇ ಅಧಿಕಾರಿಗಳ ಬಳಕೆಗೆ ಸಿಗಲಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಮಾತನಾಡಿ, ಸರ್ಕಾರಿ ಜಮೀನು ಗುರುತಿಸಲು ಬೀಟ್ ಆ್ಯಪ್ ಶೀಘ್ರವೇ ಅಧಿಕಾರಿಗಳ ಬಳಕೆಗೆ ಸಿಗಲಿದೆ. ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸರ್ಕಾರಿ ಆಸ್ತಿ ಒತ್ತುವರಿಯಾಗಿಲ್ಲ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ತಮ್ಮ ಜಿಲ್ಲಾ ಸರಹದ್ದಿನಲ್ಲಿ ಸರ್ಕಾರಿ ಜಮೀನು ಎಷ್ಟು ಇದೆ, ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಭೂಮಿ ಎಷ್ಟಿದೆ, ಎಷ್ಟು ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂಬುದರ ಕುರಿತಾಗಿ ಸಂಪೂರ್ಣ ಮಾಹಿತಿ ದಾಖಲಿಸುವ ಮೂಲಕ ಸರ್ಕಾರಿ ಆಸ್ತಿ ರಕ್ಷಿಸಬೇಕು ಎಂದು ಸೂಚನೆ ನೀಡಿದ್ದಾರೆ.