ಕೊರೋನಾ ಸೋಂಕು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮೊದಲೇ ಸಂಕಷ್ಟದಲ್ಲಿರುವ ಜನರಲ್ಲಿ ಕೊರೋನಾ ಆತಂಕ ಮೂಡಿಸಿದೆ. ಇದೇ ಮಾತುಗಳನ್ನು ಕೊಪ್ಪ ತಾಲೂಕಿನ ಹರಿಹರಪುರದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಡಿಸೆಂಬರ್ ತಿಂಗಳವರೆಗೂ ಕೊರೋನಾ ಆತಂಕ ದೇಶವನ್ನು ಕಾಡಬಹುದು ಎಂದು ಹೇಳಿದ್ದಾರೆ. ದತ್ತಾಶ್ರಮದಲ್ಲಿ ಬುದ್ಧಪೂರ್ಣಿಮೆ ಅಂಗವಾಗಿ ಕೊರೋನಾ ವಾರಿಯರ್ಸ್ ಗೆ ಗೌರವ ಸಮರ್ಪಿಸಿದ ವಿನಯ್ ಗುರೂಜಿ, ಸೇವಾನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಹಲವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದು ಮರುಜನ್ಮ ನೀಡಿದ್ದಾರೆ. ಕೊರೋನಾ ಸೇನಾನಿಗಳ ಸೇವೆಯನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕಿನಿಂದ ದೇಶವೇ ತತ್ತರಿಸಿ ಹೋಗಿದ್ದು ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಕೊರೋನಾ ಸೋಂಕು ಆತಂಕ ಡಿಸೆಂಬರ್ ವರೆಗೂ ಕಾಡಬಹುದು. ಸೋಂಕು ತಡೆಯುವ ನಿಟ್ಟಿನಲ್ಲಿ ಅಗ್ನಿಹೋತ್ರ ಹೋಮ, ರುದ್ರಹೋಮ ನಡೆಸಬೇಕು. ಇದರೊಂದಿಗೆ ಸರ್ಕಾರದ ನಿರ್ದೇಶನಗಳನ್ನು ಎಲ್ಲರೂ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.