ಬೆಂಗಳೂರು: ಲಾಕ್ ಡೌನ್ ಜಾರಿಯಾದ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಿರುವ ಖಾಸಗಿ ಬಸ್ ಮಾಲೀಕರು ಸದ್ಯಕ್ಕೆ ಬಸ್ ಸೇವೆಯನ್ನು ಆರಂಭಿಸದಿರಲು ತೀರ್ಮಾನ ಕೈಗೊಂಡಿದ್ದಾರೆ.
ಲಾಕ್ಡೌನ್ ಜಾರಿಯಾದ ನಂತರ ಎರಡು ತಿಂಗಳಿನಿಂದ ಬಸ್ ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಮಾಲೀಕರಿಗೆ ಭಾರಿ ನಷ್ಟವಾಗಿದೆ. ತೆರಿಗೆ ವಿನಾಯಿತಿ ನೀಡುವಂತೆ ಖಾಸಗಿ ಬಸ್ ಮಾಲೀಕರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸರ್ಕಾರ ಸ್ಪಂದಿಸದಿದ್ದರೆ ಸೆಪ್ಟೆಂಬರ್ ವರೆಗೆ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎಂದು ಹೇಳಲಾಗಿದೆ.
ಸರ್ಕಾರ ಅನುಮತಿ ನೀಡಿದರೂ ಖಾಸಗಿ ಬಸ್ ಪ್ರಯಾಣ ಆರಂಭವಾಗುವುದು ಅನುಮಾನವೆನ್ನಲಾಗಿದೆ. ಆರು ತಿಂಗಳು ತೆರಿಗೆ ವಿನಾಯಿತಿ ನೀಡುವ ಜೊತೆಗೆ ಮುಂದಿನ ಆರು ತಿಂಗಳಿಗೆ ಅರ್ಧ ತೆರಿಗೆ ಪಡೆಯಬೇಕು ಎಂದು ಬಸ್ ಮಾಲೀಕರು ಬೇಡಿಕೆ ಇಟ್ಟಿದ್ದು, ಇದಕ್ಕೆ ಸ್ಪಂದಿಸದಿದ್ದರೆ ಸೆಪ್ಟೆಂಬರ್ ವರೆಗೆ ಬಸ್ ಗಳನ್ನು ರಸ್ತೆಗಿಳಿಸದಿರಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.