ಬೆಂಗಳೂರು: ಲಾಕ್ ಡೌನ್ ನಡುವೆಯೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಿವಾಹ ಹಿನ್ನೆಲೆಯಲ್ಲಿ ಇದುವರೆಗೂ ಸರ್ಕಾರ ವರದಿ ನೀಡದ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಸರ್ಕಾರ ನೀಡಿರುವ ಅನುಮತಿ ಕಾನೂನು ಬದ್ಧವಾಗಿದೆಯೇ? ವಿವಾಹದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆಯೇ? ನಿಯಮಗಳನ್ನು ಪಾಲಿಸಿಕೊಂಡು ಮದುವೆ ಮಾಡಲಾಗಿದೆಯೇ? ಮದುವೆಗೆ ಆಗಮಿಸಲು ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು? ಎಂದು ಪ್ರಶ್ನಿಸಿ ಏಪ್ರಿಲ್ 24ಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೂ ಸರ್ಕಾರ ವರದಿ ಸಲ್ಲಿಸಿಲ್ಲ. ಈ ಬಗ್ಗೆ ಮತ್ತೆ ಪ್ರಶ್ನಿಸಿದ ಹೈಕೋರ್ಟ್ ಮೇ 5 ರಂದು ಮಾಹಿತಿ ನೀಡಬೇಕೆಂದು ಸೂಚನೆ ನೀಡಿದೆ.
ನಿಯಮ ಪಾಲಿಸಲಾಗಿದೆ. ನಿಖಿಲ್ ಮದುವೆ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಆದರೆ ಕೆಲವು ಫೋಟೋ ಮತ್ತು ವೀಡಿಯೋಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮದುವೆ ಮಾಡಿರುವುದು ಕಂಡು ಬಂದಿತ್ತು. ಈ ಕುರಿತಾಗಿ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದೆ.
ಲಾಕ್ಡೌನ್ ಗೈಡ್ ಲೈನ್ ಗಳನ್ನು ಉಲ್ಲಂಘಿಸಿ ಮದುವೆ ಮಾಡಲಾಗಿದೆ ಎಂದು ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 24ರಂದು ಸ್ಪಷ್ಟನೆ ನೀಡಬೇಕು ಎಂದು ಹೇಳಲಾಗಿತ್ತಾದರೂ ಇದುವರೆಗೂ ನೀಡದ ಹಿನ್ನೆಲೆಯಲ್ಲಿ ಮೇ 5 ರಂದು ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ಸೂಚಿಸಿದೆ ಎಂದು ಹೇಳಲಾಗಿದೆ.