
ಬೆಂಗಳೂರು: ಕೊರೊನಾ ನಡುವೆಯೂ ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅನೇಕ ದೇವಾಲಯಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಕಾರಣಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಭಕ್ತರು ನಾಗರ ಕಲ್ಲಿಗೆ, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ. ಮನೆಗಳು, ಹೊಲ, ಜಮೀನು ತೋಟಗಳಲ್ಲಿ ಹುತ್ತಕ್ಕೆ, ನಾಗರ ಕಲ್ಲುಗಳಿಗೆ ಹಾಗೂ ದೇವಾಲಯಗಳ ಬಳಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸುವ ದೃಶ್ಯಗಳು ಕಂಡು ಬಂದಿವೆ.
ಪ್ರಮುಖ ನಾಗ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಶ್ರಾವಣ ಮಾಸ ಆರಂಭದ ದಿನಗಳಲ್ಲಿ ಬರುವ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಈ ದಿನಗಳಂದು ನಾಗರ ಕಲ್ಲುಗಳಿಗೆ ಹಾಲೆರೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಕೆಲವರು ಜೀವಂತ ಹಾವುಗಳಿಗೆ ಹಾಲು ಕುಡಿಸುವ ಪ್ರಯತ್ನ ಮಾಡಿದ್ದಾರೆನ್ನಲಾಗಿದ್ದು, ಹಾವು ಹಾಲು ಕುಡಿಯುವುದಿಲ್ಲ. ಹಾವುಗಳಿಗೆ ಹಾಲೆರೆಯುವ ಬದಲು ಬಡಮಕ್ಕಳಿಗೆ ಹಾಲು ಕೊಡಿ ಎಂದು ಹೇಳಲಾಗಿದೆ.