ವಿಧಾನಪರಿಷತ್ ಗೆ ಎಂಟ್ರಿ ಕೊಡಲು ರೆಡಿಯಾಗಿದ್ದ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲಿ ಭಾರಿ ಚರ್ಚೆ ನಡೆದಿದೆ.
ಈ ಮೂವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಒಂದೇ ಸಮುದಾಯದ ಮೂವರಿಗೆ ಒಂದೇ ಸಲಕ್ಕೆ ಟಿಕೆಟ್ ನೀಡುವ ಕುರಿತು ಆಕ್ಷೇಪ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೊಸ ತಲೆನೋವು ಶುರುವಾಗಿದೆ.
ಒಂದೇ ಸಮುದಾಯಕ್ಕೆ 3 ಟಿಕೆಟ್ ಕೊಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರು ಕುರುಬ ಸಮುದಾಯದವರಾಗಿದ್ದು, ಏಕಕಾಲಕ್ಕೆ ಒಂದೇ ಸಮುದಾಯದ ಮೂವರಿಗೆ ಟಿಕೆಟ್ ನೀಡುವ ವಿಚಾರ ಪಕ್ಷದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮೂವರಿಗೂ ಪರಿಷತ್ ಟಿಕೆಟ್ ಕೊಡುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಬಿಜೆಪಿ ನಾಯಕರು ಹೊಂದಿದ್ದು ಈ ಮೂರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ ನಂತರ ಸಚಿವ ಸ್ಥಾನ ಕೊಡಬೇಕೆಂಬ ಲೆಕ್ಕಾಚಾರದಲ್ಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಕುರುಬ ಸಮುದಾಯದ ಇಬ್ಬರು ಸಚಿವರಿದ್ದಾರೆ. ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಮತ್ತು ಬೈರತಿ ಬಸವರಾಜ್ ಸಚಿವರಾಗಿದ್ದು ಹೀಗಾಗಿ ಅದೇ ಸಮುದಾಯದ ಮೂವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಮತ್ತು ಸಚಿವ ಸ್ಥಾನ ನೀಡುವ ಕುರಿತು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ. ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಸರ್ಕಾರ ರಚಿಸುವಾಗ ಜಾತಿ, ಸಮುದಾಯ ನೋಡಲಿಲ್ಲ. ಮೂವರಿಗೂ ಟಿಕೆಟ್ ನೀಡಿ ಸಚಿವರನ್ನಾಗಿ ಮಾಡಬೇಕೆಂದು ಬೇಡಿಕೆ ಇಡಲಾಗಿದೆ ಎನ್ನಲಾಗಿದೆ.