ಕೊರೊನಾ ಮಹಾಮಾರಿಯ ಕರಿ ನೆರಳು ಇನ್ನೂ ದೇಶವನ್ನು ಬಿಟ್ಟಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಲೇ ಇದೆ. ಈಗಾಗಲೇ 598 ಕೊರೊನಾ ಕೇಸ್ ನಮ್ಮ ರಾಜ್ಯದಲ್ಲಿ ಧೃಡಪಟ್ಟಿವೆ. ಇದಕ್ಕೆ ಔಷಧ ಕಂಡು ಹಿಡಿಯಲು ವೈದ್ಯರು ಬಿಡುವಿಲ್ಲದೆ ಸಂಶೋಧನೆ ಮಾಡುತ್ತಿದ್ದಾರೆ. ಇತ್ತ ಜನ ಕೂಡ ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಕೊರೊನಾ ಹೋಗಲಾಡಿಸಲು ಹರಕೆಯೊಂದನ್ನು ಹೊತ್ತಿದ್ದಾರೆ.
ಮಂಗಳೂರಿನ ಕೂಳೂರು ಸಮೀಪದ ಗುಡ್ಡೆಯಂಗಡಿಯ ನಿವಾಸಿ ಬಸಮ್ಮ ಎನ್ನುವವರು ಕೊರೊನಾ ಮಹಾಮಾರಿ ದೇಶದಿಂದ ಹೊರ ಹೋಗುವ ತನಕ ಬರಿಗಾಲಿನಲ್ಲಿ ನಡೆಯುವುದಾಗಿ ಶಪಥ ಮಾಡಿದ್ದಾರೆ. ಇದರ ಜೊತೆಗೆ ಕಲ್ಲುರ್ಟಿ ದೈವಕ್ಕೆ ಪ್ರತಿ ಶುಕ್ರವಾರ ಉಪವಾಸ ಮಾಡೋದಾಗಿ ನಿರ್ಧಾರ ಮಾಡಿದ್ದಾರೆ.
ಕಲ್ಲುರ್ಟಿ ದೈವದ ಭಕ್ತೆಯಾಗಿರುವ ಬಸಮ್ಮ ಮೂಲತಃ ಬಾಗಲಕೋಟೆಯವರು. ಕೆಲಸದ ನಿಮಿತ್ತ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ ಕೊರೊನಾದಿಂದ ದೇಶ ಮುಕ್ತವಾದರೆ ಕಲ್ಲುರ್ಟಿ ದೈವಕ್ಕೆ ಹರಕೆ ತೀರಿಸೋದಾಗಿ ಬೇಡಿಕೊಂಡಿದ್ದಾರೆ.