ಬೆಂಗಳೂರು: ಮಾರ್ಚ್ 24 ರಿಂದ ಆರಂಭವಾಗಿದ್ದ ಲಾಕ್ಡೌನ್ ಮೇ 17 ರವರೆಗೂ ಮುಂದುವರೆಯಲಿದೆ. ಇಂದಿನಿಂದ ಮೂರನೇ ಹಂತದ ಲಾಕ್ಡೌನ್ ಆರಂಭವಾಗಲಿದ್ದು, ಕೆಲವು ವಿನಾಯಿತಿ ನೀಡಲಾಗಿದೆ.
ಹಸಿರು, ಕಿತ್ತಳೆ, ಕೆಂಪು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಕಂಟೇನ್ಮೆಂಟ್ ಜೋನ್ ಗಳಲ್ಲಿ ನಿರ್ಬಂಧ ಮುಂದುವರೆಯಲಿದೆ.
ರೈಲು, ಮೆಟ್ರೋ, ವಿಮಾನ ಸೇರಿ ಬಹುತೇಕ ಸಾರಿಗೆ ಸೇವೆ ಇರುವುದಿಲ್ಲ. ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಮನರಂಜನೆ ಕೇಂದ್ರ, ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳು ಇರುವುದಿಲ್ಲ.
ಕಂಟೇನ್ಮೆಂಟ್ ಜೋನ್ ಹೊರತಾದ ಕೆಂಪು ವಲಯದಲ್ಲಿ ಹಾಲಿ ಇರುವ ಅಗತ್ಯ ಸೇವೆ, ಖಾಸಗಿ ಆಸ್ಪತ್ರೆಗೆ ಒಪಿಡಿ ಷರತ್ತುಬದ್ಧ ಮದ್ಯ ಮಾರಾಟ, ಅನುಮತಿ ಪಡೆದ ವಾಹನಗಳ ಸಂಚಾರಕ್ಕೆ ಅವಕಾಶವಿರುತ್ತದೆ. ಅಗತ್ಯ ವಸ್ತುಗಳ ಸೇವೆ ನೀಡುವ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಅಂಗಡಿಗಳು ಓಪನ್ ಆಗಲಿವೆ. ಶೇಕಡ 33ರಷ್ಟು ನೌಕರರೊಂದಿಗೆ ಸರ್ಕಾರಿ, ಖಾಸಗಿ ಕಚೇರಿ ಕೆಲಸ ನಿರ್ವಹಿಸಲಿದೆ. ಸ್ಥಳೀಯ ನೌಕರರು, ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ನಿರ್ವಹಿಸಬಹುದಾಗಿದೆ.
ಕಿತ್ತಳೆ ವಲಯದಲ್ಲಿ ಕೆಂಪು ವಲಯದಲ್ಲಿ ಅನುಮತಿ ಇರುವ ಎಲ್ಲಾ ವ್ಯವಸ್ಥೆಗಳು ಮುಂದುವರೆಯಲಿದ್ದು ಹೆಚ್ಚುವರಿಯಾಗಿ ಸಲೂನ್ ಶಾಪ್, ಇ ಕಾಮರ್ಸ್ ಸೇವೆಯಲ್ಲಿ ಎಲ್ಲಾ ರೀತಿಯ ವಸ್ತುಗಳು, ಎಲ್ಲಾ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದೆ.
ಹಸಿರು ವಲಯದಲ್ಲಿ ಕೆಂಪು ಮತ್ತು ಕಿತ್ತಳೆ ವಲಯದಲ್ಲಿರುವ ವ್ಯವಸ್ಥೆಗಳ ಜೊತೆಗೆ ಜಿಲ್ಲೆಯ ಒಳಗೆ ಷರತ್ತುಬದ್ಧ ಸರ್ಕಾರಿ ಬಸ್ ಸಂಚಾರ ಇರುತ್ತದೆ. ಎಲ್ಲಾ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗಬೇಕು.