ಹುಬ್ಬಳ್ಳಿ: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸದ್ಯ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸಾರಿಗೆ ಬಸ್ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರದಲ್ಲಿಯೇ ಬಸ್ಸುಗಳ ರಾತ್ರಿ ಸಂಚಾರವನ್ನೂ ಕೂಡ ಪುನರಾರಂಭಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು 1700 ಕೋಟಿ ರೂ.ನಷ್ಟ ಅನುಭವಿಸಿವೆ. ಹಾನಿ ಇನ್ನೂ ಮುಂದುವರೆದಿದೆ. ಸಾರಿಗೆ ನಿಗಮಗಳ ನೌಕರರ ಏಪ್ರಿಲ್ ತಿಂಗಳ ವೇತನಕ್ಕಾಗಿ ಸರ್ಕಾರ 326 ಕೋಟಿ ರೂ.ನೀಡಿದೆ. ಮೇ ತಿಂಗಳ ವೇತನಕ್ಕಾಗಿ ಅರ್ಧದಷ್ಟು ಅನುದಾನ ನೀಡಿದೆ. ಪರಿಸ್ಥಿತಿ ಸಂಕಷ್ಟದಲ್ಲಿದೆಯಾದರೂ, ಸದ್ಯ ಟಿಕೆಟ್ ದರದ ಹೆಚ್ಚಳ ಕುರಿತು ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ಲಾಕ್ಡೌನ್ ಜಾರಿಯಿಂದಾಗಿ ಸ್ಥಗಿತವಾಗಿದ್ದ ಸಾರ್ವಜನಿಕ ಸಾರಿಗೆ ಸೇವೆ ಮೇ 6 ರಿಂದ ಪುನರಾರಂಭವಾಗಿದೆ. ಸಾರ್ವಜನಿಕ ಸಾರಿಗೆ ಅವಲಂಭಿಸಿರುವ ಜನರ ತೊಂದರೆ ನೀಗಿಸಲು ಬಸ್ ಸಂಚಾರ ಪುನರಾರಂಭದ ಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಅಂತರ ನಿಯಮದ ಪಾಲನೆ ಕಡ್ಡಾಯವಾಗಿರುವುದರಿಂದ ಶೇ.100 ರಷ್ಟು ಆಸನಗಳ ಭರ್ತಿ ಸಾಧ್ಯವಿಲ್ಲ. ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಜೂನ್ 1 ರ ನಂತರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳು ಏನಿರುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು. ರಾಜ್ಯದ 4 ನಿಗಮಗಳಲ್ಲಿ ಒಟ್ಟು ಸುಮಾರು 1,30,000 ಸಿಬ್ಬಂದಿ ವರ್ಗದವರಿದ್ದಾರೆ. ಏಪ್ರಿಲ್ ತಿಂಗಳ ವೇತನಕ್ಕೆ ಸರ್ಕಾರ ಅನುದಾನ ನೀಡಿದೆ. ಮೇ ತಿಂಗಳ ವೇತನಕ್ಕೆ ಅರ್ಧದಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.