ಬೆಂಗಳೂರು: ಕೊರೋನಾ ಬಿಕ್ಕಟ್ಟಿನಿಂದಾಗಿ ಆರ್ಥಿಕತೆಗೆ ತೀವ್ರ ಹಿನ್ನಡೆಯಾಗಿದ್ದು ಅನಗತ್ಯ ವೆಚ್ಚ ಕಡಿತಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳನ್ನು ವಿಲೀನಗೊಳಿಸುವ ಜೊತೆಗೆ ಹುದ್ದೆಗಳಿಗೂ ಕತ್ತರಿ ಹಾಕಲು ಚಿಂತನೆ ನಡೆಸಿದೆ. ಖರ್ಚು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಿವಿಧ ಇಲಾಖೆ ಮತ್ತು ನಿಗಮ-ಮಂಡಳಿಗಳಲ್ಲಿ ಇರುವ ಹೆಚ್ಚುವರಿ ಹುದ್ದೆಗಳಿಗೆ ಕತ್ತರಿ ಹಾಕಲಾಗುವುದು. ಕೆಲವು ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ಆಡಳಿತಕ್ಕೆ ಸರ್ಜರಿ ಮಾಡಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ ಸುಮಾರು 2000 ಕೋಟಿ ರೂಪಾಯಿಯಷ್ಟು ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಬಿಳಿ ಆನೆಗಳಾಗಿರುವ ಅನೇಕ ಇಲಾಖೆಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇಂತಹ ಇಲಾಖೆಗಳಲ್ಲಿ ಇದ್ದು, ಅವರಿಗೆ ಮಾಡಲು ಕೆಲಸವಿಲ್ಲ. ಸಂಬಳ ಮತ್ತು ಭತ್ಯೆಗೆ ಸುಮಾರು 2000 ಕೋಟಿ ರೂಪಾಯಿ ಖರ್ಚಾಗುತ್ತದೆ. ಅಂತಹ ಇಲಾಖೆಗಳನ್ನು ವಿಲೀನಗೊಳಿಸಿ ಹುದ್ದೆಗಳಿಗೆ ಕತ್ತರಿ ಹಾಕುವುದರಿಂದ ಉಳಿತಾಯವಾಗುವ 2000 ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಇನ್ನು ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಸಂದರ್ಭದಲ್ಲಿ ಆಡಳಿತ ಸುಧಾರಣಾ ಆಯೋಗದ ವರದಿ ಅನ್ವಯ 25000 ಹುದ್ದೆಗಳನ್ನು ವಿ.ಆರ್.ಎಸ್. ಮೂಲಕ ಕಡಿತಗೊಳಿಸುವ ಶಿಫಾರಸು ಮಾಡಲಾಗಿದ್ದು ಈ ಬಗ್ಗೆಯೂ ಯಡಿಯೂರಪ್ಪ ಸರ್ಕಾರ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.