ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಇಲಾಖೆಯು ಪ್ರಸ್ತುತ ಕೊರೋನಾ ಲಾಕ್ಡೌನ್ ಕಾರಣದಿಂದ ಜಿಲ್ಲೆಯಲ್ಲಿನ ಹೂ ಬೆಳೆಗಾರರು ಮಾರುಕಟ್ಟೆಯಿಲ್ಲದೇ ನಷ್ಟ ಹೊಂದಿದ್ದು, ಅಂತಹ ಹೂ ಬೆಳೆಗಾರರಿಗೆ ಸರ್ಕಾರವು ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಹೂವು ಬೆಳೆದು ಕೂಯ್ಲಿಗೆ ಬಂದಿದ್ದು, ಮಾರುಕಟ್ಟೆಯಿಲ್ಲದೇ ನಷ್ಟ ಹೊಂದಿರುವ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಹೂ ಬೆಳೆಗಾರರು ನಿಗದಿತ ನಮೂನೆ ಅರ್ಜಿಯನ್ನು ಸಮೀಪದ ತಾಲೂಕು ತೋಟಗಾರಿಕೆ ಕಚೇರಿಯಿಂದ ಪಡೆದು, ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ಬುಕ್ ಪ್ರತಿ ಹಾಗೂ ಸ್ವಯಂ ದೃಢೀಕೃತ ಘೋಷಣಾ ಪತ್ರಗಳನ್ನು ಲಗತ್ತಿಸಿ ಮೇ 23 ರೊಳಗಾಗಿ ಸಲ್ಲಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿರುತ್ತಾರೆ.
ಸರ್ಕಾರವು ಈಗಾಗಲೇ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಸಾಲುಗಳ ಬೆಳೆ ಸರ್ವೇ ಕಾರ್ಯ ಮುಗಿಸಿದ್ದು, ಬೇಸಿಗೆ ಸರ್ವೇ ಕಾರ್ಯವು ಮುಗಿಯುವ ಹಂತದಲ್ಲಿದೆ. ಈ ಸರ್ವೇಯಲ್ಲಿ ನಮೂದಾಗಿರುವ ಬೆಳೆಗಾರರಿಗೆ ಆದ್ಯತೆ ಮೇರೆಗೆ ಪರಿಹಾರ ನೀಡಲಾಗುವುದು. ಉಳಿಕೆ ರೈತರ ಹೂ ತೋಟವನ್ನು ಪರಿಶೀಲಿಸಿ ಹಂತ ಹಂತವಾಗಿ ಪರಿಹಾರ ಧನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ದೂ.ಸಂ.: 08182-222633ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.