ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಶ್ರಮಿಕ ವರ್ಗದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪ್ಯಾಕೇಜ್ ನೀಡಿದ್ದಾರೆ.
ಅಂತೆಯೇ ಹೂವು ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. 11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಹೂವುಗಳನ್ನು ಬೆಳೆದಿರುವ ರೈತರಿಗೆ ರೈತರಿಗೆ ಗರಿಷ್ಠ 25 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.
ಹೂವು ಮಾರಾಟವಾಗದೆ ಬೆಳೆಗಾರರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ನಷ್ಟಕ್ಕೆ ಒಳಗಾದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಪ್ರಕಟಿಸಲಾಗುವುದು. ಎಷ್ಟು ಮೊತ್ತದ ಪರಿಹಾರ ನೀಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ನೊಂದಣಿಯಾಗಿರುವ 15.80 ಲಕ್ಷ ಕಟ್ಟಡ ಕಾರ್ಮಿಕರಲ್ಲಿ 11.80 ಲಕ್ಷ ಕಾರ್ಮಿಕರ ಖಾತೆಗಳಿಗೆ ತಲಾ 2000 ರೂ. ಪಾವತಿ ಮಾಡಲಾಗಿದ್ದು ಇನ್ನುಳಿದ 4 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆ ಮಾಹಿತಿ ಲಭ್ಯವಾದ ಕೂಡಲೇ ಅವರ ಖಾತೆಗೆ 2000 ರೂಪಾಯಿ ಜಮಾ ಮಾಡಲಾಗುವುದು. ಇದರೊಂದಿಗೆ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ 3000 ರೂಪಾಯಿ ಪರಿಹಾರ ನೀಡಲಿದ್ದು ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.