ಸಣ್ಣ ಮತ್ತು ಅತಿ ಸಣ್ಣ ರೈತರು ಎಂಬ ಷರತ್ತು ಸಡಿಲಿಸಿ ಎಲ್ಲಾ ರೈತರಿಗೂ ಬೆಂಬಲ ಬೆಲೆ ಪ್ರಯೋಜನ ದೊರಕಿಸಿಕೊಡಲು ಸರ್ಕಾರ ಮುಂದಾಗಿದೆ.
ಖರೀದಿ ಕೇಂದ್ರಗಳಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಂದ ಮಾತ್ರ ಕೃಷಿ ಉತ್ಪನ್ನ ಮಾರಾಟ ಮಾಡಲು ಸಾಧ್ಯವೆಂಬ ನಿರ್ಬಂಧ ಸಡಿಲಗೊಳಿಸಲಾಗಿದೆ. ಎಲ್ಲಾ ರೈತರಿಗೂ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದವರಿಗೆ ಯೋಜನೆ ಜಾರಿಗೊಳಿಸಿದ್ದರಿಂದ 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದ ರೈತರಿಗೆ ಸಮಸ್ಯೆಯಾಗಿತ್ತು. ಈಗ ಎಲ್ಲ ರೈತರಿಗೂ ಬೆಂಬಲ ಬೆಲೆಯ ಪ್ರಯೋಜನ ದೊರಕಿಸಿಕೊಡಲಾಗಿದೆ.
ಕೃಷಿ ಇಲಾಖೆಯ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಲ್ಲಿ ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರ ಮಾಹಿತಿ ದಾಖಲಿಸಿದ ರೈತರಿಗೆ ನೀಡಿರುವ ನಂಬರ್ ಅನ್ನು ಕೇಂದ್ರದ ವೆಬ್ಸೈಟ್ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಭತ್ತ, ಜೋಳ ಮಾರಾಟಕ್ಕಾಗಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಪ್ರತಿ ರೈತರಿಂದ 75 ಕ್ವಿಂಟಾಲ್ ಬದಲಿಗೆ 50 ಕ್ವಿಂಟಾಲ್ ಗೆ ಸೀಮಿತಗೊಳಿಸಿ ಎಲ್ಲ ರೈತರು ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ 75 ಕೆಜಿ ಭತ್ತಕ್ಕೆ 1361 ರೂಪಾಯಿ ಸಿಗಲಿದೆ. ಕ್ವಿಂಟಾಲ್ ಗೆ 1815 ರೂಪಾಯಿ ಬೆಂಬಲ ಬೆಲೆ ನಿಗದಿಯಾಗಿದೆ.