ಬೆಂಗಳೂರು: ಲಾಕ್ ಡೌನ್ ಜಾರಿ ಮಾಡಿದ ಕಾರಣ ತತ್ತರಿಸಿರುವ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು ಕೊರೋನಾ ಸೋಂಕು ಇಲ್ಲದ ಹಸಿರು ವಲಯಕ್ಕೆ ಸೇರಿದ 14 ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಲಾಗಿದೆ.
ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಆರೆಂಜ್ ವಲಯದಲ್ಲಿ ಸೋಂಕು ಪ್ರದೇಶ ಬಿಟ್ಟು ಉಳಿದ ಕಡೆ ವಹಿವಾಟು ನಡೆಸಲು ಉಸ್ತುವಾರಿ ಸಚಿವರಿಗೆ ಅನುಮತಿ ನೀಡುವ ಅಧಿಕಾರ ನೀಡಲಾಗಿದೆ. ಕೈಗಾರಿಕೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.
ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಯಾದಗಿರಿ, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳಿಗೆ ಆರಂಭಿಕ ಅನುಮತಿ ಸಿಕ್ಕಿದೆ. ಎಸ್ಇಜೆಡ್ ಕೈಗಾರಿಕೆಗಳು ಮತ್ತು ರಪ್ತು ಆಧಾರಿತ ಕೈಗಾರಿಕೆಗಳು, ಗ್ರಾಮಾಂತರ ಪ್ರದೇಶಗಳ ಕೈಗಾರಿಕೆಗಳು, ನಗರಸಭೆ ಪುರಸಭೆ ವ್ಯಾಪ್ತಿಯ ಹೊರಗಿರುವ ವಸತಿ ಸಮುಚ್ಛಯ ಮತ್ತು ಮಾರುಕಟ್ಟೆ ಸಮುಚ್ಚಯ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನೊಂದಾಯಿಸಿರುವ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ನೀಡಲಾಗಿದೆ.