alex Certify ಕಾಂಗ್ರೆಸ್ ಆರೋಪಕ್ಕೆ ತಿರುಗೇಟು: ಲೆಕ್ಕ ಮುಂದಿಟ್ಟ ಅಶ್ವತ್ಥ್ ನಾರಾಯಣ್, ಶ್ರೀರಾಮುಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು: ಲೆಕ್ಕ ಮುಂದಿಟ್ಟ ಅಶ್ವತ್ಥ್ ನಾರಾಯಣ್, ಶ್ರೀರಾಮುಲು

ಬೆಂಗಳೂರು: ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪರಿಕರವನ್ನು ಆಯಾ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಖರೀದಿ ಮಾಡಲಾಗಿದೆ. ಇದರಲ್ಲಿ ಒಂದು ನಯಾಪೈಸೆಯಷ್ಟೂ ಅಕ್ರಮ ನಡೆದಿಲ್ಲ. ಕೇವಲ ದುರುದ್ದೇಶದಿಂದ ಮಾತ್ರ ಪ್ರತಿಪಕ್ಷ ನಾಯಕರು ಅರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದ್ದಾರೆ.

ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ಪ್ರತಿಪಕ್ಷ ನಾಯಕರ ಕಪೋಲಕಲ್ಪಿತ ಊಹೆ ಮಾತ್ರ. ಕೇವಲ ಆರೋಪ ಮಾಡಲಿಕ್ಕೆ ಮಾತ್ರವೇ ಅವರು ಹೀಗೆ ಹೇಳಿರುವುದು ಎಂದು ಡಿಸಿಎಂ ಹೇಳಿದರೆ, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿರುವುದು ಸರಿಯಲ್ಲ. ನನ್ನ ಅವಧಿಯಲ್ಲಿ ಒಂದು ವೇಳೆ ಅವ್ಯವಹಾರ ನಡೆದಿದ್ದರೇ ಒಂದು ಕ್ಷಣವೂ ನಿಲ್ಲದೆ ರಾಜೀನಾಮೆ ನೀಡುತ್ತೇನೆ ಎಂದು ಶ್ರೀರಾಮುಲು ಸವಾಲು ಹಾಕಿದ್ದಾರೆ.

ಇಡೀ ದೇಶದಲ್ಲಿ ಕೊರೋನಾಗೆ ಮೊದಲ ಸಾವು ಆಗಿದ್ದು ಕಲ್ಬುರ್ಗಿಯಲ್ಲಿ. ನಾನು ಎರಡು ದಿನ ಅಲ್ಲೇ ಇದ್ದು ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಕೊಟ್ಟರೇ ಆಗಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದರು. ಅದನ್ನು ತಯಾರು ಮಾಡಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ಆದೇಶ ನೀಡಿದೆವು. ಈವರೆಗೂ ನಮಗೆ 40 ಸಾವಿರ ಕಿಟ್ ಮಾತ್ರ ಪೂರೈಕೆಯಾಗಿದೆ. ನಾವು ಕೆಲಸ ಮಾಡುತ್ತಿರುವುದು ಪ್ರತಿಪಕ್ಷದ ಕಣ್ಣಿಗೆ ಕಾಣುವುದಿಲ್ಲವೇ? ಅಕ್ರಮವನ್ನು ಅವರು ಸಾಬೀತು ಮಾಡಿದರೆ ಈಗಲೇ ಕುರ್ಚಿ ಬಿಟ್ಟು ಎದ್ದು ಹೋಗುತ್ತೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಮುಖ್ಯಮಂತ್ರಿಯಾದಿಯಾಗಿ ನಾವೆಲ್ಲರೂ ಬಹಳ ಕಷ್ಟಪಟ್ಟು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಅಂಥ ವೇಳೆಯಲ್ಲಿ 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದು ವೈದ್ಯರು ಬೇಡಿಕೆ ಇಟ್ಟರು. ಚೀನಾ, ಸಿಂಗಾಪುರದಿಂದ ಈ ಕಿಟ್ ಖರೀದಿ ಮಾಡಿದ್ದೇವೆ. ಮೂರು ಕಂಪನಿಗಳಿಂದ ಒಟ್ಟು 10 ಲಕ್ಷ ಕಿಟ್ ಖರೀದಿಸಿದ್ದೇವೆ. ಆರಂಭದಲ್ಲಿ ಅದರ ಬೆಲೆ ಹೆಚ್ಚಿತ್ತು. ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ ಇದೆ ಎಂದು ತಿಳಿಸಿದ್ದಾರೆ.

ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಕೋವಿಡ್-19 ಬಂದಾಗ ಒಂದು‌ ಕಂಪನಿ ಮಾತ್ರ ವೆಂಟಿಲೇಟರ್’ಗಳನ್ನು ತಯಾರು ಮಾಡುತ್ತಿತ್ತು. ಹೀಗಾಗಿ ಆಗಲೇ 130 ವೆಂಟಿಲೇಟರ್‌ಗೆ ಆದೇಶ ನೀಡಲಾಗಿತ್ತು. ಅದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಆರ್ಡರ್ ಮಾಡಲಾಗಿತ್ತು. ಆ ಕಂಪನಿ 130 ವೆಂಟಿಲೇಟರ್ ಪೈಕಿ 80 ಮಾತ್ರ ಪೂರೈಸಿತ್ತು. ಪ್ರತಿಯೊಂದರ ಬೆಲೆ 5.65 ಲಕ್ಷ. 18 ಲಕ್ಷ ರೂ.ಗಳಿಗೆ ಐಸಿಯು‌ನಲ್ಲಿ‌ ಬಳಸಬಹುದಾದ ಉತ್ಕೃಷ್ಟ ಗುಣಮಟ್ಟದ ವೆಂಟಿಲೇಟರ್ ಖರೀದಿಯಾಗಿದೆ. ಇನ್ನು ತಮಿಳುನಾಡಿನಲ್ಲಿ ಕೇವಲ 4 ಲಕ್ಷಕ್ಕೆ ವೆಂಟಿಲೇಟರ್ ಕೊಡುತ್ತಾರೆ ಎನ್ನುತ್ತಾರೆ. ಅದು ಮೊಬೈಲ್ ವೆಂಟಿಲೇಟರ್. ಒಂದು‌ ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗಲು, ಕೇವಲ ಅಂಬ್ಯುಲೆನ್ಸ್‌ನಲ್ಲಿ ಬಳಕೆಯಾಗುವ ವೆಂಟಿಲೇಟರ್ ಅದು. ಶಿವಾನಂದ ಪಾಟೀಲ್ ಆರೋಗ್ಯ ಸಚಿವರಾಗಿದ್ದಾಗ 2019ರಲ್ಲಿ ವೆಂಟಿಲೇಟರ್ ಖರೀದಿಯಾಗಿದೆ. ಆಗ 15,12,000 ರೂ. ವೆಚ್ಚ ಮಾಡಲಾಗಿದೆ. ಅಂದಿನ ಪರಿಸ್ಥಿತಿ ಏನಿತ್ತು? ಇದುವರೆಗೆ ಮೂರು ಬಾರಿ ವೆಂಟಿಲೇಟರ್ ಖರೀದಿಯಾಗಿದೆ. ಇದೆಲ್ಲ ಪ್ರತಿಪಕ್ಷ ನಾಯಕರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಈ ವರ್ಷದ ಆರಂಭದಿಂದಲೂ ಕೋವಿಡ್-19 ಎದುರಿಸುವ ಪರಿಸ್ಥಿತಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಬೇಕಿತ್ತು. ಬೇರೆ ಹಂತದಲ್ಲಿ ಹುಷಾರು ತಪ್ಪಿದವರು ಆಸ್ಪತ್ರೆಗೆ ಬರುತ್ತಾರೆ. ಹಿಂದೆ ದುಡ್ಡು ಕೊಟ್ಟರೂ ಸ್ಯಾನಿಟೈಜೇಷರ್, N-95 ಮಾಸ್ಕ್ ಸಿಗುತ್ತಿರಲಿಲ್ಲ. ಪಿಪಿಇ ಕಿಟ್ ಕೂಡ ಇರಲಿಲ್ಲ. ಎಲ್ಲಾ ಪರಿಕರಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಸೋಂಕಿನಿಂದ ಏಕಾಏಕಿ ಬೇಡಿಕೆ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಚೀನಾ ಕೂಡ ಕೈಕೊಟ್ಟಿತು. ಇವತ್ತು ಒಳ್ಳೆಯ ಪಿಪಿಇ ಕಿಟ್ 3,900 ರೂ. ಇದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದೆ. ಇದರಲ್ಲಿ ತನಿಖೆಯ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಸದನದಲ್ಲಿ ಉತ್ತರ ನೀಡಲು ಸರಕಾರ ಸಿದ್ಧವಿದೆ. ಸರಕಾರದ್ದು ಎಳ್ಳಷ್ಟು ತಪ್ಪಿಲ್ಲ. ಹೀಗೆ ತಪ್ಪಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ. ಸುಖಾಸುಮ್ಮನೆ ಹಿಟ್ ಅಂಡ್ ರನ್ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದಶೀ ಜಾವೇದ್ ಆಖ್ತರ್, ರಾಜ್ಯ ಡ್ರಗ್ಸ್ ಲಾಜಿಸಿಕ್ಟಿಕ್ಸ್ ಸಂಸ್ಥೆ ಹೆಚ್ಚುವರಿ ನಿರ್ದೇಶಕಿ ಎನ್ ಮಂಜುಶ್ರೀ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...