ಕಲ್ಬುರ್ಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದ ಸರ್ಕಾರ ಒಂದು ಗಂಟೆಯೊಳಗೆ ನಿರ್ಧಾರ ಬದಲಿಸಿ ವರ್ಗಾವಣೆಯನ್ನು ರದ್ದುಪಡಿಸಿದೆ.
ಕೋರೋನಾ ಹಾಟ್ ಸ್ಪಾಟ್ ಆಗಿರುವ ಕಲಬುರ್ಗಿಯಲ್ಲಿ ದೇಶದ ಮೊದಲ ಸಾವು ಸಂಭವಿಸಿತ್ತು. ಆಗಿನಿಂದಲೂ ಜಿಲ್ಲಾಧಿಕಾರಿ ಬಿ. ಶರತ್ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಕೋರೋನಾ ಸೋಂಕು ತಡೆಗೆ ಬಿ. ಶರತ್ ನೇತೃತ್ವದ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕೊರೋನಾ ಸೋಂಕಿತರು ಹೆಚ್ಚಾಗಿರುವ ಕಲಬುರ್ಗಿಯಿಂದ ಜಿಲ್ಲಾಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಒಂದು ಗಂಟೆಯೊಳಗೆ ವರ್ಗಾವಣೆಯನ್ನು ರದ್ದುಪಡಿಸಿದ್ದಾರೆ.
ಜಿಲ್ಲಾಧಿಕಾರಿ ವರ್ಗಾವಣೆ ಹಿಂದೆ ರಾಜಕೀಯ ಒತ್ತಡ ಇರುವುದು ಗೊತ್ತಾಗಿದೆ. ಜನಪ್ರತಿನಿಧಿಯೊಬ್ಬರು ಒತ್ತಡ ಹೇರಿ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವರ್ಗಾವಣೆ ಆದೇಶ ಜಾರಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಪರವಾಗಿ ಮುಖ್ಯಮಂತ್ರಿಯವರಿಗೆ ವರದಿಗಳು ಸಲ್ಲಿಕೆಯಾಗಿವೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂಥ ಸಂದರ್ಭದಲ್ಲಿ ವರ್ಗಾವಣೆ ಮಾಡಬಾರದು ಎಂದು ಅನೇಕ ಶಾಸಕರು ಒತ್ತಡ ಹಾಕಿದ್ದಾರೆ. ಜನರಿಂದಲೂ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದು ಗಂಟೆಯೊಳಗೆ ವರ್ಗಾವಣೆಯನ್ನು ರದ್ದು ಮಾಡಲಾಗಿದೆ.
ಪತ್ನಿ ಮಕ್ಕಳನ್ನು ಊರಿಗೆ ಕಳುಹಿಸಿ ಕೊರೋನಾ ಕಾರ್ಯದಲ್ಲಿ ನಿರತರಾಗಿರುವ ಶರತ್ ಜನಾನುರಾಗಿ ಅಧಿಕಾರಿಯಾಗಿದ್ದಾರೆ. 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಮೆಚ್ಚುಗೆ ಪಡೆದಿದ್ದಾರೆ. ಹಗಲು ರಾತ್ರಿ ಕೊರೋನಾ ಕಾರ್ಯದಲ್ಲಿ ತೊಡಗಿ ಸೋಂಕು ನಿವಾರಣೆಗೆ ಪ್ರಯತ್ನ ನಡೆಸಿದ್ದಾರೆ. ಕೊನೆಗೂ ಜನಾಕ್ರೋಶಕ್ಕೆ ಮಣಿದ ಸರ್ಕಾರ ಜನಾನುರಾಗಿ ಅಧಿಕಾರಿ ಶರತ್ ಅವರ ವರ್ಗಾವಣೆಯನ್ನು ರದ್ದುಪಡಿಸಿದೆ ಎಂದು ಹೇಳಲಾಗಿದೆ.