ಬೆಂಗಳೂರು: ಕೊರೋನಾ ವೈರಸ್ ಹರಡುವಂತೆ ಕರೆ ನೀಡಿದ್ದ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ಕೊರೋನಾ ಸೋಂಕಿತರು ಹೊರಗೆ ಹೋಗಿ ಸೀನಿ, ಸಾರ್ವಜನಿಕವಾಗಿ ವೈರಸ್ ಹರಡಿ, ಕೊರೋನಾ ಸೋಂಕು ಹರಡುವ ಮೂಲಕ ಪ್ರಪಂಚವನ್ನು ಕೊನೆಗಾಣಿಸಿ. ನಾಯಿಗಳನ್ನು ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಪೊಲೀಸರು ಕೋರ್ಟ್ ಗೆ ತನಿಖೆ ವಿವರ ಸಲ್ಲಿಸಿದ್ದು, ಆರ್ಟಿಕಲ್ 21 ರ ಅಡಿ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಆರೋಪಿ ಪರ ವಾದ ಮಂಡಿಸಲಾಗಿದೆ.
ಆರ್ಟಿಕಲ್ 21 ಕ್ಕಿಂತ ಸಂವಿಧಾನದ ಮುನ್ನುಡಿಗೆ ಪ್ರಾಮುಖ್ಯತೆ ನೀಡಲಾಗುವುದು. ಕೋವಿಡ್ 19 ಕ್ಕೆ ಹೆದರಿದ ಜನರಲ್ಲಿ ಭೀತಿ ಹುಟ್ಟಿಸುವ ಯತ್ನ ನಡೆಸಲಾಗಿದೆ. ಇಂತಹ ಪೋಸ್ಟ್ ಗಳಿಂದ ಸಾಮರಸ್ಯ ಸಮಗ್ರತೆಗೆ ಧಕ್ಕೆಯಾಗುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅಭಿಪ್ರಾಯಪಟ್ಟಿದ್ದು, ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮುಜೀಬ್ ಕೊರೋನಾದಂತಹ ಆಘಾತಕಾರಿ ಸಂದರ್ಭದಲ್ಲಿ ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ನಡೆಸಿ ದೇಶದ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಂದೇಶ ಪ್ರಕಟಿಸಿದ್ದಾರೆ. ಅಲ್ಲದೆ ಕುವೈತ್ ಮತ್ತು ಬಹರೇನ್ ಗಳಲ್ಲಿ ಅನೇಕ ವರ್ಷ ನೆಲೆಸಿದ್ದು ಧಾರ್ಮಿಕ ಮೂಲಭೂತವಾದ ದೇಶವಿರೋಧಿ ಚಿಂತನೆ ಬೆಳೆಸಿಕೊಂಡಿದ್ದ. ಪಾಕಿಸ್ತಾನದ ವಾಟ್ಸಾಪ್ ನಂಬರ್ ಅನ್ನು ಇಸ್ಲಾಮಿಕ್ ಮಾಹಿತಿಗಾಗಿ ಹಂಚಿಕೊಂಡಿದ್ದಾನೆ ಎನ್ನಲಾಗಿದ್ದು, ಈತನ ಸಂಪರ್ಕಗಳ ಬಗ್ಗೆ ಎನ್ಐಎಎ ತನಿಖೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.