ಶಿವಮೊಗ್ಗ: ರಿಪಬ್ಲಿಕ್ ಟಿವಿ ವಾಹಿನಿಯ ಪ್ರಧಾನ ಸಂಪಾದಕ ಮತ್ತು ಸಹ-ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ.
ಏಪ್ರಿಲ್ 21 ರಂದು ಅರ್ನಾಬ್ ಗೋಸ್ವಾಮಿ ರಿಪಬ್ಲಿಕ್ ಟಿವಿ ವಾಹಿನಿಯಲ್ಲಿ ಪೂಚ್ತಾ ಭಾರತ್ ಕಾರ್ಯಕ್ರಮ, ಮಹಾರಾಷ್ಟ್ರದ ಫಾಲ್ಕರ್ ನಲ್ಲಿ ನಡೆದ ಗುಂಪು ಹತ್ಯೆಯ ಕುರಿತು ಏಪ್ರಿಲ್ 16, 17 ರಂದು ಚರ್ಚಾ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೋಮು ಪ್ರಚೋದಕ ಮತ್ತು ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶೇಕಡ 80 ರಷ್ಟು ಹಿಂದೂಗಳೇ ಇರುವ ಭಾರತದಲ್ಲಿ ಫಾಲ್ಕರ್ ಗುಂಪು ಹತ್ಯೆಯ ಕುರಿತು ಸೋನಿಯಾಗಾಂಧಿ ಮೌನ ವಹಿಸಿದ್ದಾರೆ. ಯಾರಾದರೂ ಮೌಲ್ವಿ ಅಥವಾ ಪಾದ್ರಿಯ ಹತ್ಯೆ ಆಗಿದ್ದರೆ, ದೇಶದ ತುಂಬಾ ಬೊಬ್ಬಿಡುತ್ತಿದ್ದರು ಎಂದು ಸೋನಿಯಾ ಗಾಂಧಿಯವರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶವೇ ಕೋರೋನಾ ಸಂಕಷ್ಟದಲ್ಲಿರುವಾಗ ಅರ್ನಾಬ್ ಗೋಸ್ವಾಮಿ ಪ್ರಚೋದನಕಾರಿ ಹೇಳಿಕೆ ನೀಡಿ ಹಿಂದೂ-ಮುಸ್ಲಿಮರ ನಡುವೆ ಪ್ರಚೋದನೆ, ಸೋನಿಯಾ ಗಾಂಧಿಯವರ ಬಗ್ಗೆ ಆಧಾರರಹಿತ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ವಿನಾಕಾರಣ ದೂಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಸ್ವಾಮಿ ಅವರು ಪ್ರತಿಷ್ಟಿತ ಮಾಧ್ಯಮದ ನಿರೂಪಕರಾಗಿ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಮಾತನಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಇದರಿಂದಾಗಿ ರಾಷ್ಟ್ರದಲ್ಲಿನ ಕೋಮು ಸೌಹಾರ್ದತೆ ಹದಗೆಡುತ್ತದೆ ಹಾಗೂ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಮತ್ತು ಕೋಮುವಾದವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ. ಕೋವಿಡ್-19ರ ಕಠಿಣ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿರುವಾಗ ಈ ರೀತಿಯ ಗಲಭೆಗಳು ದೇಶವನ್ನು ಇನ್ನೂ ಸಂಕಷ್ಟಕ್ಕೆ ದೂಡಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಪ್ರಸಾರವಾದ ನಂತರ ಅರ್ನಾಬ್ ಗೋಸ್ವಾಮಿ ತಮ್ಮ ಹೇಳಿಕೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, ಕ್ಷಮೆ ಕೇಳಿಲ್ಲ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಪ್ರವೀಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಟಿ.ವಿ. ರಂಜಿತ್, ಕಾರ್ಯದರ್ಶಿ ಆರ್. ಕಿರಣ್ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಮೊದಲಾದವರಿದ್ದರು.