ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಒಳಗೊಳಗೆ ಷಡ್ಯಂತ್ರ ನಡೆಯುತ್ತಿದ್ದು ಏಕಾಏಕಿ ಅಲರ್ಟ್ ಆಗಿರುವ ಸಿಎಂ ಯಡಿಯೂರಪ್ಪ ಹಿರಿಯ ಸಚಿವರಿಗೆ ಬುಲಾವ್ ನೀಡಿದ್ದಾರೆ.
ಕೆಲವು ಬಿಜೆಪಿ ಶಾಸಕರು ಪ್ರತ್ಯೇಕ ಸಭೆ ನಡೆಸಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರದ ಪರ ನಿಲ್ಲುವಂತೆ ಹಿರಿಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಹಿರಿಯ ಸಂಪುಟ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿರುವ ಸಿಎಂ ಸರ್ಕಾರ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.
ಹಿರಿಯ ಸಚಿವರನ್ನು ಮನೆಗೆ ಕರೆಸಿಕೊಂಡು ಸಿಎಂ ಚರ್ಚೆ ನಡೆಸಿದ್ದಾರೆ. ಶನಿವಾರವಷ್ಟೇ ಐವರು ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಪ್ರತ್ಯೇಕ ಸಭೆ ನಡೆಸಿ ಜೊತೆಗೆ ನಿಲ್ಲುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಸುಭದ್ರವಾಗಿದ್ದು ನಾವು ಸರ್ಕಾರದ ಪರವಾಗಿದ್ದೇವೆ ಎಂದು ಹೇಳಿಕೆ ನೀಡುವಂತೆ ಸಿಎಂ ಹಿರಿಯ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.
ಇನ್ನು ಶಾಸಕರ ಸಭೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸಿಎಂ ಕುರಿತಾಗಿ ಯಡಿಯೂರಪ್ಪ ಆಪ್ತವಲಯಕ್ಕೆ ಅಸಮಾಧಾನವಾಗಿದೆ. ಅಷ್ಟೆಲ್ಲ ಗಂಭೀರ ಸಭೆ ನಡೆದಿದ್ದರೂ, ಸಿಎಂ ಪರಿಗಣಿಸಲಿಲ್ಲ. ಸಭೆ ನಡೆಸಿದವರು ಸುಲಭವಾಗಿ ಬಿಡುವುದಿಲ್ಲ. ಆದರೆ ಯಡಿಯೂರಪ್ಪ ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಯಡಿಯೂರಪ್ಪ ಆಪ್ತ ವಲಯದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಶಾಸಕ ಉಮೇಶ್ ಕತ್ತಿ ಅವರನ್ನು ಸಿಎಂ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೋನಾ ಸಂಕಷ್ಟದ ವೇಳೆ ಇದರಿಂದ ಬಚಾವ್ ಆದ್ರೆ ಒಳ್ಳೆಯದು. ಇಲ್ಲದಿದ್ದರೆ ಪರಿಸ್ಥಿತಿ ಕಷ್ಟಕ್ಕೆ ತಿರುಗುತ್ತಿತ್ತು. ಉಮೇಶ್ ಕತ್ತಿ ಗಂಭೀರವಾಗಿ ಈ ವಿಚಾರ ತೆಗೆದುಕೊಂಡರೆ ಇನ್ನು ಕಷ್ಟವಾಗುತ್ತದೆ. ಕತ್ತಿ ಟೀಮ್ ಗೆ ಹೈಕಮಾಂಡ್ ನಲ್ಲಿ ಪ್ರಬಲ ಕೃಪಾಕಟಾಕ್ಷವಿದೆ. ಇದೇ ಕಾರಣಕ್ಕೆ ಉಮೇಶ್ ಕತ್ತಿ ದೂರವಾಗಿ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊರೋನಾ ಬಿಕ್ಕಟ್ಟಿನ ವೇಳೆಯಲ್ಲೇ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಸಿಎಂ ಯಡಿಯೂರಪ್ಪ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.