ಚಿತ್ರದುರ್ಗ: ಹಸಿರು ವಲಯವಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರು ತಬ್ಲಿಘಿಗಳಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇದರೊಂದಿಗೆ ಚಿತ್ರದುರ್ಗದಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು ಇವರಲ್ಲಿ ಒಬ್ಬರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ.
15 ಜನ ಗುಜರಾತ್ ನ ಅಹಮದಾಬಾದ್ ನಿಂದ ಬಸ್ ನಲ್ಲಿ ಚಿತ್ರದುರ್ಗಕ್ಕೆ ಬಂದಿದ್ದಾರೆ. ಗುಜರಾತ್ ನಲ್ಲಿ ಇದ್ದ ಸಂದರ್ಭದಲ್ಲಿ 15 ಜನರಲ್ಲಿ ನಾಲ್ವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದು ಗುಣಮುಖರಾದ ಅವರು ಚಿತ್ರದುರ್ಗಕ್ಕೆ ಮರಳಿದ್ದರು.
ನಾಲ್ವರಲ್ಲಿ ಮೂವರಿಗೆ ಮತ್ತೆ ಸೋಂಕು ಪತ್ತೆಯಾಗಿದೆ. ಉಳಿದವರ ವೈದ್ಯಕೀಯ ವರದಿಯಲ್ಲಿ ಕೊರೋನಾ ನೆಗೆಟಿವ್ ಬಂದಿದೆ. ಗುಜರಾತ್ ನಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕು ತಗುಲಿದ ಮೂವರನ್ನು ಕೋವಿಡ್ -19 ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ.
ಗುಜರಾತ್ ನಿಂದ 15 ಮಂದಿ ಬಸ್ ನಲ್ಲಿ ಬಂದಿದ್ದು, ಇವರೊಂದಿಗೆ ತುಮಕೂರಿನ 18 ಜನ ಕೂಡ ಬಸ್ ನಲ್ಲಿ ಇದ್ದರು. ಬಸ್ ನಲ್ಲಿ ಇದ್ದವರು ಮತ್ತು ಚೆಕ್ ಪೋಸ್ಟ್ ನಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ವೇಳೆ ಜೊತೆಗಿದ್ದವರಿಗೂ ಕೊರೋನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಚಿತ್ರದುರ್ಗದ ಕೋವಿಡ್ -19 ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.