ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಪುನರ್ಮನನ ತರಗತಿಗಳನ್ನು ಆಂಗ್ಲಮಾಧ್ಯಮದಲ್ಲಿಯೂ ಪ್ರಾರಂಭಿಸಲಾಗುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಏಪ್ರಿಲ್ 29 ರಿಂದ ಚಂದನವಾಹಿನಿಯಲ್ಲಿ ತರಗತಿಗಳನ್ನು ಆರಂಭಿಸಿದ್ದು, ಆಂಗ್ಲಮಾಧ್ಯಮದಲ್ಲಿಯು ಮೇ 9 ರಿಂದ ಪುನರ್ಮನನ ತರಗತಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ವಿದ್ಯಾರ್ಥಿಗಳು ಪುನರ್ಮನನ ತರಗತಿಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ 30 ದಿನಗಳ ಕಾಲ ನಡೆಯುವ ಪುನರ್ಮನನ ತರಗತಿಗಳಲ್ಲಿ ಮೊದಲ 16 ದಿನ ಗಣಿತ ಮತ್ತು ವಿಜ್ಞಾನ ನಂತರದಲ್ಲಿ 10 ದಿನಗಳ ಕಾಲ ಸಮಾಜ-ವಿಜ್ಞಾನ ತರಗತಿಗಳನ್ನು ಆಂಗ್ಲಮಾಧ್ಯಮದಲ್ಲಿ ಬೋಧಿಸಲಾಗುವುದು ಎಂದು ಹೇಳಿದ್ದಾರೆ.
ನಂತರ 6 ದಿನಗಳ ಕಾಲ ಸಂಸ್ಕೃತ ಹಿಂದಿ-ಉರ್ದು ಮೊದಲಾದ ಭಾಷೆಗಳ ತರಗತಿಗಳನ್ನು ನಡೆಸಲಾಗುವುದು. ಮೇ 9 ರಿಂದ ಪ್ರತಿದಿನ ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿ ಪ್ರಸಾರವಾಗುತ್ತಿವೆ. ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯುಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು ಎಂದು ಹೇಳಲಾಗಿದೆ.