ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಂದ ರಾಜೀನಾಮೆ ಕೊಡಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವ ಸ್ಥಾನ ವಂಚಿತ ಕೆಲ ಶಾಸಕರುಗಳು ಅಪಸ್ವರ ತೆಗೆದಿದ್ದಾರಾದರೂ ಅದನ್ನು ಶಮನ ಮಾಡಲಾಗಿತ್ತು.
ಆದರೆ ರಾಜ್ಯದಲ್ಲಿ ಈಗ ಕೊರೊನಾ ಸಂಕಷ್ಟ ಎದುರಾಗಿರುವ ಪರಿಣಾಮ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೊತೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟಬೇಕಿದೆ. ಇಂತಹ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಿರುವ ಮಧ್ಯೆ ಕೆಲ ಶಾಸಕರುಗಳು ಪ್ರತ್ಯೇಕ ಸಭೆ ನಡೆಸುವ ಮೂಲಕ ಹೊಸ ತಲೆನೋವು ತಂದಿಟ್ಟಿದ್ದಾರೆ.
ದಿಢೀರ್ ನಡೆದಿರುವ ಈ ರಾಜಕೀಯ ಬೆಳವಣಿಗೆ ಮೂಲ ಬಿಜೆಪಿಗರಿಗೆ ಇರುಸುಮುರುಸು ತಂದಿದೆ ಎನ್ನಲಾಗಿದ್ದು ಒಳಗೊಳಗೆ ಕುದಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಹುತೇಕ ಶಾಸಕರುಗಳು ಯಡಿಯೂರಪ್ಪನವರ ಆಪ್ತ ವಲಯದಲ್ಲಿದ್ದರೆಂಬುದು ಗಮನಾರ್ಹ.
ಹೀಗಾಗಿ ಈ ಅತೃಪ್ತಿಯನ್ನು ತಣಿಸಲು ಯಡಿಯೂರಪ್ಪ ಯಾವ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬುದನ್ನು ಮೂಲ ಬಿಜೆಪಿಗರು ಕಾದು ನೋಡುತ್ತಿದ್ದಾರೆ. ಅಲ್ಲದೆ ಇತರೆ ಪಕ್ಷದ ಶಾಸಕರುಗಳನ್ನು ಸೆಳೆದು ಸರ್ಕಾರ ರಚಿಸಿ ತಪ್ಪು ಮಾಡಿದೇವಾ ಎಂಬ ಭಾವನೆಯೂ ಹಲವರಲ್ಲಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆಂಬ ಕಾರಣಕ್ಕೆ ಸಂತೋಷ್ ಜಿ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.