ಬೆಂಗಳೂರು: ಬೆಂಗಳೂರಿನ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಂಡರ್ ಪಾಸ್ ನಲ್ಲಿ ನೀರು ತುಂಬಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಮೆಜೆಸ್ಟಿಕ್ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿದೆ. ಹೆಚ್ಎಸ್ಆರ್ ಲೇಔಟ್ ನಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ. 24ನೇ ಮುಖ್ಯರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ರಸ್ತೆಬದಿ ವ್ಯಾಪಾರಿಗಳು ಪಾರಾಗಿದ್ದಾರೆ.
ಮೆಜೆಸ್ಟಿಕ್ ನಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಪರದಾಡುವಂತಾಗಿದೆ. ಅಲ್ಲದೆ ಮಳೆಯಿಂದಾಗಿ ಕೊರೋನಾ ವಾರಿಯರ್ಸ್ ಕೆಲಸ ಮಾಡಲು ಸಮಸ್ಯೆ ಎದುರಾಗಿದೆ. ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ, ಆರೋಗ್ಯ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ ಪರದಾಟ ನಡೆಸುವಂತಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತೊಂದರೆಯಾಗಿದ್ದು, ಗಾಳಿ ಮಳೆಯಿಂದ ಆಶ್ರಯ ಪಡೆಯಲು ಪರದಾಡಿದ್ದಾರೆ.
ಮಧ್ಯಾಹ್ನದ ವೇಳೆಯಲ್ಲೇ ಮೋಡಗಳು ದಟ್ಟೈಸಿ ಕತ್ತಲು ಆವರಿಸಿ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಕಬ್ಬನ್ ಪಾರ್ಕ್, ಶಾಂತಿನಗರ, ರಿಚ್ಮಂಡ್ ಟೌನ್, ರಾಜಾಜಿನಗರ, ಕೆಆರ್ ಸರ್ಕಲ್, ಹೆಬ್ಬಾಳ ಮೊದಲಾದ ಕಡೆ ಮಳೆಯಾಗಿದೆ.
ಭಾನುವಾರ ಲಾಕ್ ಡೌನ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಜನ ಸಂಚಾರವಿಲ್ಲದಂತಾಗಿದೆ. ಮೈಸೂರು ರಸ್ತೆ, ಕೆಆರ್ ಮಾರ್ಕೇಟ್ ಜಲಾವೃತಗೊಂಡಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಚರಂಡಿಗಳು ತುಂಬಿ ಹರಿದು ರಸ್ತೆ ಮೇಲೆ 2 – 3 ಅಡಿಗಳಷ್ಟು ನೀರು ಹರಿದಿದೆ.