’ಬಾಬಾ ಕಾ ಡಾಬಾ’ ಬಳಿಕ ಬೀದಿ ಬದಿ ವರ್ತಕರ, ಅದರಲ್ಲೂ ಹಿರಿಯ ಜೀವಗಳ, ದಿನನಿತ್ಯದ ಬದುಕು ಹಾಗೂ ಕೊರೋನಾ ಲಾಕ್ಡೌನ್ ಕಾರಣದಿಂದ ಅವರು ಕಷ್ಟ ಪಡುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕರು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಔಷಧೀಯ ಸಸಿಗಳನ್ನು ಮಾರಾಟ ಮಾಡುತ್ತಿರುವ ಹಿರಿಯ ಜೀವ ರೇವಣ್ಣ ಸಿದ್ದಪ್ಪ, ಬೀದಿ ಬದಿಯಲ್ಲಿ ಕುಳಿತು ಹೊಟ್ಟೆ ಪಾಡಿಗಾಗಿ ಅವರು ಪಡುತ್ತಿರುವ ಪಾಡಿನ ದೃಶ್ಯಾವಳಿಗಳು ವೈರಲ್ ಆಗಿವೆ. ಇದನ್ನು ಕಂಡ ಸಹೃದಯಿಗಳು ಸಿದ್ದಪ್ಪರ ನೆರವಿಗೆ ಬರುತ್ತಿದ್ದಾರೆ.
ಕನಕಪುರ ರಸ್ತೆಯ ಬದಿಯಲ್ಲಿ ಪುಟ್ಟದಾದ ಸಸಿ ಅಂಗಡಿ ಇಟ್ಟುಕೊಂಡಿರುವ ಸಿದ್ದಪ್ಪ ಇಡೀ ದಿನ ಬಿಸಿಲಿನ ಅಡಿಯಲ್ಲಿ ಕೇವಲ ಪುಟ್ಟದೊಂಡು ಛತ್ರಿ ಹಿಡಿದುಕೊಂಡು ಕೂರುತ್ತಿದ್ದರು. ಅವರ ಈ ಚಿತ್ರವನ್ನು ಶುಭಂ ಜೈನ್ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು.
“10-30 ರೂ.ಗಳಿಗೆಲ್ಲಾ ಸಸಿಗಳನ್ನು ಮಾರುವ ಸಿದ್ಧಪ್ಪನವರು ಸಾರಕ್ಕಿ ಸಿಗ್ನಲ್ ಬಳಿ ಇದ್ದು, ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು, ತಮ್ಮನ್ನು ಬಿಸಿಲಿನಿಂದ ರಕ್ಷಿಸಿಕೊಂಡು ಮತ್ತೊಂದು ಕೈಯಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ” ಎಂದು ಜೈನ್ ವಿವರಿಸಿದ್ದರು.
ನಟರಾದ ರಣದೀಪ್ ಹೂಡಾ, ಸೋನು ಸೂದ್ ಹಾಗೂ ಮಾಧವನ್ರನ್ನು ಈ ಟ್ವೀಟ್ಗೆ ಟ್ಯಾಗ್ ಮಾಡಲಾಗಿತ್ತು. ಹೂಡಾ ರೀಟ್ವೀಟ್ ಮಾಡಿ, ಅವರ ನೆರವಿಗೆ ಬನ್ನಿ ಎಂದು ತಮ್ಮ ಫಾಲೋವರ್ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.