ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವುದರಿಂದ ಆಸ್ಪತ್ರೆ ಸಿಗದೆ ಕಂಗಲಾದ ಗರ್ಭಿಣಿ ಖಾಲಿ ಜಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ದಂತ ವೈದ್ಯೆ ಮತ್ತು ಡೆಂಟಲ್ ಕ್ಲಿನಿಕ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದು ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ಏಪ್ರಿಲ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶ ಮೂಲದ ಕೂಲಿ ಕಾರ್ಮಿಕರಾಗಿರುವ 20 ವರ್ಷದ ಶಾಂತಿ ಅವರಿಗೆ 14ರಂದು ಬೆಳಗ್ಗೆ 6 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರ ಪತಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು, 5 ಕಿಲೋಮೀಟರ್ ವರೆಗೂ ಆಸ್ಪತ್ರೆ ಹುಡುಕಿಕೊಂಡು ದಂಪತಿ ನಡೆದಾಡಿದ್ದಾರೆ. ಕೊನೆಗೆ 7 ಕಿಲೋಮೀಟರ್ ನಡೆದ ಬಳಿಕ ದೊಡ್ಡಬೊಮ್ಮಸಂದ್ರದಲ್ಲಿರುವ ಕೃಪಾ ಡೆಂಟಲ್ ಕ್ಲಿನಿಕ್ ಕಂಡಿದೆ.
ಆಸ್ಪತ್ರೆಯ ಶೌಚಾಲಯಕ್ಕೆ ಹೋಗಿ ಬರುವುದಾಗಿ ಶಾಂತಿ ಹೇಳಿದ್ದು ಶೌಚಾಲಯ ಮೊದಲ ಮಹಡಿಯಲ್ಲಿ ಇದ್ದ ಕಾರಣ ಮೆಟ್ಟಿಲು ಹತ್ತಲು ಸಾಧ್ಯವಾಗದೆ ಕಟ್ಟಡದ ಹಿಂಭಾಗಕ್ಕೆ ತೆರಳಿದ್ದಾರೆ. ಅಲ್ಲೇ ಅವರಿಗೆ ಹೆರಿಗೆಯಾಗಿದೆ. ತಂದೆ ಪೇಪರ್ ನಲ್ಲಿ ಮಗುವನ್ನು ಸುತ್ತಿಕೊಂಡು ಬಂದಿದ್ದಾರೆ. ಮಗು ನಿಸ್ತೇಜವಾಗಿದ್ದು, ಮೃತಪಟ್ಟಿರಬಹುದೆಂದು ಭಾವಿಸಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಇದನ್ನು ಕಂಡ ಹಾಸ್ಪಿಟಲ್ ಕ್ಲಿನಿಕ್ ಸಿಬ್ಬಂದಿ ವಿಚಾರಿಸಿದಾಗ ಮಹಿಳೆಗೆ ಹೆರಿಗೆಯಾಗಿರುವುದು ಗೊತ್ತಾಗಿದೆ. ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ದಂತ ವೈದ್ಯೆ ಡಾ. ರಮ್ಯಾ ಮತ್ತು ಕ್ಲಿನಿಕ್ ಸಿಬ್ಬಂದಿ ರಕ್ತಸ್ರಾವ ನಿಲ್ಲಿಸಿದ್ದಾರೆ. ಶಿಶುವಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದಾಗ ಉಸಿರಾಡಲು ಆರಂಭಿಸಿದೆ. ಬಳಿಕ ಎದೆಹಾಲು ಉಣಿಸಿದಾಗ ಶಿಶು ಚೇತರಿಸಿಕೊಂಡಿದೆ. ನಂತರ ತಾಯಿ-ಮಗುವನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದಂತವೈದ್ಯೆ ಮತ್ತು ಅವರ ಕ್ಲಿನಿಕ್ ಸಿಬ್ಬಂದಿಯ ಸಕಾಲಿಕ ಕ್ರಮದಿಂದ ತಾಯಿ, ಮಗುವಿಗೆ ಪುನರ್ಜನ್ಮ ಸಿಕ್ಕಂತಾಗಿದೆ.