ಹಾವೇರಿ: ನಕಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕೃಷಿಸಚಿವ ಬಿ.ಸಿ. ಪಾಟೀಲ್ ನಕಲಿ ಬೀಜ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು 8 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಬಿಡಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈಗಾಗಲೇ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಬಿ.ಸಿ. ಪಾಟೀಲ್ ಮಾಹಿತಿ ನೀಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬೀಜದ ಸಂಕಷ್ಟದಿಂದ ರೈತರನ್ನು ಪಾರುಮಾಡಲು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನಕಲಿ ಬೀಜ ಮಾರಾಟ ಮಾಡುವ ಆರೋಪಿತರ ಪರವಾಗಿ ಕೆಲವು ಮಠಾಧೀಶರು ಮತ್ತು ಜನಪ್ರತಿನಿಧಿಗಳು ಸಹಾಯ ಮಾಡಿ ಎಂದು ಹೇಳುತ್ತಿದ್ದಾರೆ.
ಬಿ.ಸಿ. ಪಾಟೀಲ್ ಅವರೇ ಇದನ್ನು ತಿಳಿಸಿದ್ದು, ಕೆಲ ಮಠಾಧೀಶರು, ಜನಪ್ರತಿನಿಧಿಗಳು ಆರೋಪಿತರ ಪರವಾಗಿ ಸಹಾಯ ಮಾಡಿ ಎಂದು ಹೇಳುತ್ತಿರುವುದನ್ನು ನೋಡಿದರೆ ದುಃಖವಾಗುತ್ತದೆ. ಕೆಲವು ವ್ಯಾಪಾರಸ್ಥರ ಹಿತಕಾಯಲು ಇಡೀ ರೈತ ಸಮುದಾಯ ಬಲಿ ಕೊಡಲು ಸಾಧ್ಯವಿಲ್ಲ. ಎಷ್ಟೇ ಒತ್ತಡ ಬಂದರೂ ಕೂಡ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.