ಮಂಗಳೂರು: ಕೇಂದ್ರ – ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ರೈತರಿಗಾಗುತ್ತಿರುವ ಅನಾನುಕೂಲ ಪರಿಹರಿಸಲು ಸದ್ಯದಲ್ಲಿಯೇ ಕೃಷಿ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರಿಗೆ ಅನೇಕ ಅನುಕೂಲ ಕಲ್ಪಿಸಿವೆ. ಅವುಗಳನ್ನು ಪಡೆಯಲು ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳಲು ರೈತರು ಕಚೇರಿಯಿಂದ ಕಚೇರಿಗೆ ಅಲೆಯಬೇಕು. ನಂತರ ದಾಖಲೆಗಳನ್ನು ಹೊತ್ತುಕೊಂಡು ತಿರುಗಬೇಕಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕಾರ್ಡ್ ನಲ್ಲಿ ಕೃಷಿಕರ ಹೆಸರು, ಊರು, ಜಮೀನಿನ ಪಹಣಿ ದಾಖಲೆಗಳು, ಇದುವರೆಗೂ ಬ್ಯಾಂಕ್ ಸೊಸೈಟಿ ಸಾಲವೂ ಸೇರಿದಂತೆ ಪಡೆದಿರುವ ಅಥವಾ ಪಡೆದಿರದ ಸೌಲಭ್ಯಗಳ ವಿವರಗಳು ಅಡಕವಾಗಿರುತ್ತವೆ. ಸಂಬಂಧಿಸಿದ ಕಚೇರಿಯಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಕಂಪ್ಯೂಟರ್ ನಲ್ಲಿ ಈ ಎಲ್ಲ ವಿವರಗಳು ಸಿಗುತ್ತವೆ. ಇಷ್ಟರಲ್ಲಾಗಲೇ ಈ ಯೋಜನೆ ಚಾಲ್ತಿಗೆ ಬರಬೇಕಿತ್ತು. ಕೋವಿಡ್ -19ನಿಂದಾಗಿ ತುಸು ಮುಂದೆ ಹೋಗಿದೆ. ಅತೀ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.