ಲಾಕ್ಡೌನ್ ಜಾರಿಯಲ್ಲಿರುವುದರಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದರ ಪರಿಣಾಮವಾಗಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ನೆರವಿಗೆ ಧಾವಿಸಿದ್ದ ಸರ್ಕಾರ 2 ಸಾವಿರ ರೂಪಾಯಿ ಧನ ಸಹಾಯ ಘೋಷಿಸಿತ್ತು.
ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ 21.50 ಲಕ್ಷ ಕಾರ್ಮಿಕರಿದ್ದು, 12.76 ಲಕ್ಷ ಕಾರ್ಮಿಕರ ಖಾತೆಗಳಿಗೆ 2 ಸಾವಿರ ರೂಪಾಯಿ ಧನ ಸಹಾಯವನ್ನು ಜಮೆ ಮಾಡಲಾಗಿತ್ತು.
ಆದರೆ ಉಳಿದ ಕಾರ್ಮಿಕರ ನೋಂದಣಿ ನವೀಕರಣವಾಗದ ಕಾರಣ ಅವರ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿದ್ದು, ಹಣ ಜಮೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಈ ಕಾರ್ಮಿಕರುಗಳಿಗೆ ಸಿಹಿಸುದ್ದಿ ನೀಡಿದ್ದು, ಇನ್ನು 15 ದಿನದೊಳಗೆ ಬಾಕಿ ಉಳಿದಿರುವ 7.81 ಲಕ್ಷ ಕಾರ್ಮಿಕರ ಖಾತೆಗಳಿಗೆ 2 ಸಾವಿರ ರೂಪಾಯಿ ಧನ ಸಹಾಯ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.