ತನ್ನ ಗಂಡನೊಂದಿಗೆ ಮುನಿಸಿಕೊಂಡು ಹೆಂಡತಿ ತವರಿಗೆ ಹೋಗಿದ್ದು, ಆಕೆಯನ್ನು ಮರಳಿ ಕರೆತರುವಂತೆ ಹೆತ್ತವರು ಬುದ್ಧಿ ಹೇಳಿದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಪಾಪಿ ಪುತ್ರನೊಬ್ಬ ಅವರನ್ನು ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕನಕಗಿರಿಯ 9ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ರಮೇಶ ಎಂಬಾತನ ಪತ್ನಿ ತವರಿಗೆ ತೆರಳಿದ್ದಳು. ಆಕೆಯನ್ನು ಕರೆತರುವಂತೆ ರಮೇಶನ ತಂದೆ ಗಿರಿಯಪ್ಪ ಹಾಗೂ ತಾಯಿ ಅಕ್ಕಮ್ಮ ಬುದ್ಧಿವಾದ ಹೇಳುತ್ತಿದ್ದರು.
ಸೋಮವಾರ ರಾತ್ರಿಯೂ ಹೆತ್ತವರು ಬುದ್ಧಿವಾದ ಹೇಳಿದ್ದು, ಇದರಿಂದ ಖಿನ್ನತೆಗೊಳಗಾಗಿದ್ದ ರಮೇಶ ಮಂಗಳವಾರ ಬೆಳಗಿನ ಜಾವ ತಂದೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ತಾಯಿ ಬಿಡಿಸಲು ಬಂದಿದ್ದು, ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ನಂತರ ತಂದೆ ಮೇಲೂ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಆರೋಪಿ ರಮೇಶನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.