ಈವರೆಗೆ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಹೊಂದಿರದೆ ಹಸಿರು ವಲಯ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಭಾನುವಾರ ಒಂದೇ ದಿನ ಎಂಟು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಜಮಾತ್ ನಲ್ಲಿ ಭಾಗವಹಿಸಲು 9 ಮಂದಿ ಮಾರ್ಚ್ 5 ರಂದು ದಾವಣಗೆರೆಯಿಂದ ರೈಲಿನ ಮೂಲಕ ತೆರಳಿದ್ದರು. ಆ ಬಳಿಕ ಲಾಕ್ ಡೌನ್ ಘೋಷಣೆಯಾದ ಕಾರಣ ಇವರುಗಳನ್ನು ಗುಜರಾತ್ ಸರಕಾರ ಕ್ವಾರಂಟೈನ್ ನಲ್ಲಿ ಇರಿಸಿತ್ತು.
ಆ ಬಳಿಕ ಅಲ್ಲಿನ ಅಧಿಕಾರಿಗಳ ಅನುಮತಿ ಮೇರೆಗೆ ಅಹಮದಾಬಾದ್, ಮುಂಬೈ ಮೂಲಕ ಬೆಳಗಾವಿ ಗಡಿಗೆ ಬಂದಿದ್ದರು. ಆದರೆ ಅಧಿಕಾರಿಗಳು ಇವರುಗಳಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಯಾವಾಗ ಸರ್ಕಾರ ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿತೋ ಆಗ ಅವರುಗಳು ಬೆಳಗಾವಿ ಮೂಲಕ ಶಿವಮೊಗ್ಗ ನಗರಕ್ಕೆ ಬಂದಿದ್ದರು.
ಇದಕ್ಕೂ ಮುನ್ನ ಶಿವಮೊಗ್ಗದ ಚೆಕ್ ಪೋಸ್ಟ್ ನಲ್ಲಿ ಇವರುಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಭಾನುವಾರ ಇದರ ವರದಿ ಬಂದಿದ್ದು ಎಂಟು ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಇವರುಗಳನ್ನು ಈಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.