ಯಾವುದೇ ಒಂದು ಕೊರೊನಾ ಸೋಂಕು ಪ್ರಕರಣ ವರದಿಯಾಗದೆ ಹಸಿರು ವಲಯದಲ್ಲಿದ್ದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಅಹಮದಾಬಾದ್ನಿಂದ ಬಂದಿದ್ದ 8 ಮಂದಿಗೆ ಪ್ರಪ್ರಥಮವಾಗಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾದಾಗ ಆತಂಕಗೊಂಡಿದ್ದರಾದರೂ ಅವರುಗಳು ಯಾವುದೇ ಸಂಪರ್ಕಕ್ಕೆ ಬಂದಿರಲಿಲ್ಲವೆಂಬ ವಿಷಯ ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಆ ಬಳಿಕ ಕೊರೊನಾ ಸೋಂಕು ಪೀಡಿತರೊಂದಿಗೆ ಯಾವುದೇ ಸಂಪರ್ಕವಿರದ ಶಿವಮೊಗ್ಗ ತಾಲೂಕಿನ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಾಗ ತಳಮಳಗೊಂಡಿದ್ದರು. ಅದರಲ್ಲೂ ಆ ವ್ಯಕ್ತಿಯ ಪುತ್ರ ಗೋಪಾಲಗೌಡ ಬಡಾವಣೆಯಲ್ಲಿರುವ ‘ಮೋರ್’ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದನೆಂಬ ಸಂಗತಿ ತಿಳಿದು ಬೆಚ್ಚಿಬಿದ್ದಿದ್ದರು.
ಮೋರ್ ಮಾರಾಟ ಮಳಿಗೆಗೆ ಪ್ರತಿನಿತ್ಯ ನೂರಾರು ಮಂದಿ ಭೇಟಿ ನೀಡುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕೊರೊನಾ ಸೋಂಕು ಪೀಡಿತ ವ್ಯಕ್ತಿಯ ಪುತ್ರನ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ನೆಗೆಟಿವ್ ಎಂದು ತಿಳಿಸಲಾಗಿದೆ. ಹೀಗಾಗಿ ಶಿವಮೊಗ್ಗದ ಜನತೆ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.