ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈವರೆಗೆ ಒಂದೇ ಒಂದು ಕರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿದ್ದು, ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಇದರ ಮಧ್ಯೆ ಒಂದು ವೇಳೆ ಸೋಂಕು ಪ್ರಕರಣ ಪತ್ತೆಯಾದರೆ ಯಾವ ರೀತಿ ಅಂತಹ ಸ್ಥಳವನ್ನು ಸೀಲ್ ಡೌನ್ ಮಾಡಬೇಕೆಂಬುದರ ಕುರಿತು ಪೊಲೀಸ್ ಇಲಾಖೆಯಿಂದ ಅಣಕು ಪ್ರದರ್ಶನ ಮಾಡಿದ್ದು, ಇದು ವಿವಿಧ ವದಂತಿ ಹರಡಲು ಕಾರಣವಾಗಿದೆ.
ಶಿವಮೊಗ್ಗ ನಗರದ ಬಿಬಿ ಸ್ಟ್ರೀಟ್ ನಲ್ಲಿ ‘ಅಣಕು’ ಸೀಲ್ ಡೌನ್ ಮಾಡಿದ ಪೊಲೀಸರು ಬಿಬಿ ಸ್ತ್ರೀಟ್, ಸಿದ್ದಯ್ಯ ರಸ್ತೆ ಹಾಗೂ ಓಟಿ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಕೆಲಕಾಲ ಬಿಗಿ ಬಂದೋಬಸ್ತ್ ಮಾಡಿದ್ದರು. ಇದರ ಫೋಟೋ ಬಳಸಿಕೊಂಡ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಶಿವಮೊಗ್ಗದಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕರೋನಾ ಸೋಂಕು ಪ್ರಕರಣಗಳು ಕಂಡು ಬಂದಿಲ್ಲ.