ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ವಿವಾಹ ನಡೆಸುವ ವೇಳೆ ಕೇವಲ 50 ಮಂದಿ ಮಾತ್ರ ಹಾಜರಿರಲು ಆದೇಶಿಸಲಾಗಿದೆ. ಆದರೆ ಪ್ರಕರಣವೊಂದರಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಲ್ಲದೆ ಬಾಲ್ಯ ವಿವಾಹ ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ತಾಲ್ಲೂಕಿನ ಹೊಳೆಹನಸವಾಡಿ ಹಾಗೂ ಚಿತ್ರದುರ್ಗದಲ್ಲಿ ಮಂಗಳವಾರದಂದು ಇಬ್ಬರು ಅಪ್ರಾಪ್ತ ಬಾಲಕಿಯರ ವಿವಾಹ ನಿಗದಿಯಾಗಿದ್ದು, ಈ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದಕ್ಕೆ ಬ್ರೇಕ್ ಹಾಕಿದ್ದಾರೆ. ಅಲ್ಲದೆ ಪೋಷಕರಿಗೆ ಈ ಸಂದರ್ಭದಲ್ಲಿ ತಿಳಿಹೇಳಿದ್ದಾರೆ.
ಅನುಪಿನಕಟ್ಟೆಯ ಅಪ್ರಾಪ್ತ ಬಾಲಕಿಯ ವಿವಾಹ ಚಿತ್ರದುರ್ಗದಲ್ಲಿ ನಿಗದಿಯಾಗಿದ್ದು, ಇದರ ಮಾಹಿತಿ ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲಾ ರಕ್ಷಣಾ ಘಟಕದವರು ಚಿತ್ರದುರ್ಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿ ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ.