ಶಿವಮೊಗ್ಗ: ಕೋವಿಡ್-19 ಲಾಕ್ ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ನ್ಯಾಯಾಲಯದ ಕಲಾಪಗಳು ಸೋಮವಾರದಿಂದಲೇ ನಿಯಮಾವಳಿಗೊಳಪಟ್ಟು ಆರಂಭವಾಗಿವೆ.
ಸದ್ಯಕ್ಕೆ ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ಪ್ರವೇಶವಿರುವುದಿಲ್ಲ ಮತ್ತು ವಾದ ಮಂಡನೆಗೆ ಇದ್ದ ಪ್ರಕರಣಗಳಿಗೆ ಅವಕಾಶವಿದೆ. ಹಾಗಾಗಿ ಇಂದು ಕೂಡ ಶಿವಮೊಗ್ಗದ ನ್ಯಾಯಾಲಯದಲ್ಲಿ ಕಕ್ಷಿದಾರರಿಲ್ಲದೇ ಒಂದು ಕಚೇರಿ ರೀತಿಯಲ್ಲಿ ನ್ಯಾಯಾಲಯ ಕಂಡುಬಂದಿತು.
ಕೆಲವು ಕಕ್ಷಿದಾರರು ಹೊರಗಡೆಯೇ ಇದ್ದು ತಮ್ಮ ತಮ್ಮ ವಕೀಲರನ್ನು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ವಕೀಲರು ಕೂಡ ಕೋಟ್ ಧರಿಸದೇ ಕೇವಲ ಬ್ಯಾಂಡ್ ಕಟ್ಟಿಕೊಂಡು ವಾದ ಮಾಡಲು ಅವಕಾಶ ನೀಡಲಾಗಿತ್ತು ಮತ್ತು ನ್ಯಾಯಾಧೀಶರನ್ನು ಒಳಗೊಂಡಂತೆ ವಕೀಲರು ಮತ್ತು ಅಲ್ಲಿನ ಸಿಬ್ಬಂದಿಗಳು ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿತ್ತು.
ಹಾಗೆಯೇ ನ್ಯಾಯಾಲಯದ ಆವರಣದೊಳಗೆ ವಾಹನಗಳನ್ನು ನಿಲ್ಲಿಸಲು ಅವಕಾಶವಿಲ್ಲದಿರುವುದರಿಂದ ರಸ್ತೆಯಲ್ಲಿಯೇ ವಾಹನಗಳ ಸಾಲು ಸಾಲಾಗಿ ನಿಂತಿದ್ದು ಕಂಡುಬಂದಿತು. ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ವಕೀಲರಿಗೆ ಅರ್ಜಿ ಸಲ್ಲಿಕೆ, ಶುಲ್ಕ ಸಲ್ಲಿಸಲು ಅನುಕೂಲವಾಗುವಂತೆ ಕೌಂಟರ್ ತೆರೆದು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಆದರೆ ಎಲ್ಲರೂ ಸ್ಕ್ರೀನ್ ಟೆಸ್ಟಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿತ್ತು. ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ.