ರೋಗ ನಿರೋಧಕ ಶಕ್ತಿ ಹೊಂದಿರುವವರಿಗೆ ಕೊರೊನಾ ಸೋಂಕು ತಗುಲುವುದಿಲ್ಲ ಎಂಬ ಮಾತಿದೆ. ಹೀಗಾಗಿ ಬಹುತೇಕರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವಿವಿಧ ಔಷಧಿಗಳನ್ನು ಸೇವಿಸುತ್ತಿದ್ದಾರೆ. ಆದರೆ ಈ ಕುರಿತು ಸಮರ್ಪಕ ಮಾಹಿತಿ ಇಲ್ಲದೆ ಸೇವನೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇಲ್ಲಿದೆ ಉದಾಹರಣೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರಕ್ತ ಶುದ್ಧಿಯಾಗುತ್ತದೆ ಎಂಬ ಕಾರಣಕ್ಕೆ ಗಿಡಮೂಲಿಕೆಯ ಕಷಾಯ ಕುಡಿದ ವ್ಯಕ್ತಿಯೊಬ್ಬರು ಸಾವನ್ನಪ್ಪಿ ಮತ್ತೊಬ್ಬರು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
47 ವರ್ಷದ ಫ್ರಾನ್ಸಿಸ್ ರೇಗೊ ಸಾವನ್ನಪ್ಪಿದ್ದು, ಅವರ ತಂದೆ ನಿಕ್ಲಾವ್ ರೇಗೊ ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ. ಇವರಿಬ್ಬರೂ ಭಾನುವಾರದಂದು ಆಯುರ್ವೇದ ಅಂಗಡಿಯೊಂದರಿಂದ ವನಸ್ಪತಿ ಬೇರನ್ನು ಖರೀದಿಸಿ ಕಷಾಯ ಮಾಡಿ ಕುಡಿದಿದ್ದರೆಂದು ಹೇಳಲಾಗಿದೆ. ಬಳಿಕ ಹೊಟ್ಟೆಯಲ್ಲಿ ಉರಿ ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಫ್ರಾನ್ಸಿಸ್ ಸಾವಿಗೀಡಾಗಿದ್ದಾರೆ.
ಮೃತರ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದು, ಕಷಾಯಕ್ಕೆ ಬಳಸಿರುವ ಬೇರನ್ನು ಸಂಗ್ರಹಿಸಿರುವ ಪೊಲೀಸರು ಇದನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.