ಕೊರೊನಾದಿಂದಾಗಿ ಅಭಿವೃದ್ಧಿ ಕಾರ್ಯಗಳು ವೇಗ ಕಳೆದುಕೊಂಡಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ರೈತರು ಬೆಳೆದ ತರಕಾರಿಗಳು ಬೆಲೆ ಕಳೆದುಕೊಂಡಿರುವ ಕಾರಣ ಅದನ್ನು ಸರ್ಕಾರವೇ ಖರೀದಿ ಮಾಡಿ ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲು ನಿರ್ಧರಿಸಲಾಗಿದೆ. ಬೇಗ ಹಾಳಾಗುವ ತರಕಾರಿಗಳು, ಹಣ್ಣುಗಳನ್ನು ರೈತರಿಂದ ಖರೀದಿ ಮಾಡಿ ಇತರೆ ರಾಜ್ಯಗಳಿಗೆ ಕಳುಹಿಸಿ ಮಾರಾಟ ಮಾಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಅಭಾವವಿರುವೆಡೆ ತುರ್ತಾಗಿ ನೀರಿನ ಸರಬರಾಜು ಮಾಡುವಂತೆ ಆದೇಶಿಸಲಾಗಿದೆ.
ಸಿಎಂ ಯಡಿಯೂರಪ್ಪ ಕೇಂದ್ರ ಸಚಿವ ಸದಾನಂದಗೌಡರಿಗೆ ಕರೆಮಾಡಿ ಗೊಬ್ಬರಕ್ಕೆ ಸಂಬಂಧಿಸಿದ ಮಾಹಿತಿ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಡಿಮೆಯಿರುವ ಕಾರಣ ಸದ್ಯ ಇರುವ ಬೆಲೆಗಿಂತ ಕಡಿಮೆ ಬೆಲೆಗೆ ರೈತರಿಗೆ ಗೊಬ್ಬರ ನೀಡಲು ತೀರ್ಮಾನಿಸಲಾಗಿದ್ದು, ರೈತರಿಗೆ ಈ ಬಗ್ಗೆ ಮನವರಿಕೆ ಮಾಡಿ ಆತಂಕ ದೂರು ಮಾಡಲು ಸೂಚನೆ ನೀಡಲಾಯಿತು.
ಕೊರೊನಾ ಕಾರಣ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲಿದ್ದು, ದೇಶಿಯ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚು ಗಮನ ನೀಡುವಂತೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಆನ್ ಲೈನ್ ತರಬೇತಿ ನೀಡಲು ಸೂಚನೆ ನೀಡಲಾಗಿದೆ. ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರೆ ಚಟುವಟಿಕೆಗಳ ಬಗ್ಗೆ ಶಾಲೆ ತೆರೆಯುವವರೆಗೂ ಮಕ್ಕಳಿಗೆ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ. ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ವಿಸಲು ನಿರ್ಧರಿಸಲಾಗಿದೆ.