ವೃದ್ಧ ಮಹಿಳೆಯೊಬ್ಬಳು ತನ್ನ ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇದ್ದ ಹಣ ಪಡೆಯುವ ಸಲುವಾಗಿ ಮಾಡಿರುವ ಕಿತಾಪತಿ ಕಂಡು ಬ್ಯಾಂಕ್ ಸಿಬ್ಬಂದಿ ಮಾತ್ರವಲ್ಲ ಸಾರ್ವಜನಿಕರೂ ಸಹ ದಂಗಾಗಿ ಹೋಗಿದ್ದಾರೆ. ಇಂತಹದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ದೊಡ್ಡಮಟ್ಟಿ ಗ್ರಾಮದ ಸುಮಾ ಎಂಬವರು ಆಯನೂರಿನ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಇದರಲ್ಲಿ ಹಣವಿಡಲಾಗಿತ್ತು. ಆದರೆ ಮನೆಯವರ ಕಿರುಕುಳದಿಂದ ಬೇಸತ್ತ ಸುಮಾ ತಮ್ಮ ತಾಯಿಯೊಂದಿಗೆ ಬೇರೆ ಊರಿನಲ್ಲಿ ನೆಲೆಸಿದ್ದರು.
ಇದನ್ನೇ ಬಳಸಿಕೊಂಡ ಸುಮಾರ ಅಜ್ಜಿ ಗೌರಮ್ಮ ಬ್ಯಾಂಕಿಗೆ ಬಂದು ಮೊಮ್ಮಗಳು ಮೃತಪಟ್ಟಿರುವ ಕಾರಣ ಆಕೆಯ ಖಾತೆಯಲ್ಲಿರುವ ಹಣವನ್ನು ನನಗೆ ನೀಡಿ ಎಂದು ಕೇಳಿದ್ದರು. ಆದರೆ ಸುಮಾ ಅವರ ಹಣಕ್ಕೆ ತಾಯಿ ನಾಮಿನಿ ಆಗಿದ್ದ ಕಾರಣ ಹಾಗೇ ಕೊಡಲು ಬರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದು ಸುಮಾಳ ತಾಯಿಯೂ ಮೃತಪಟ್ಟಿದ್ದಾರೆ ಎಂದು ಗೌರಮ್ಮ ಹೇಳಿದ್ದಾರೆ.
ಅಷ್ಟೇ ಅಲ್ಲ ಮೊಮ್ಮಗಳು ಸುಮಾ ಹಾಗೂ ಆಕೆಯ ತಾಯಿಯ ಮರಣ ಪತ್ರವನ್ನು ಅಜ್ಜಿ ಗೌರಮ್ಮ ಬ್ಯಾಂಕಿಗೆ ನೀಡಿದ್ದು, ಇದೇ ಸಂದರ್ಭದಲ್ಲಿ ಸುಮಾ ತನ್ನ ತಾಯಿಯ ಜೊತೆ ಬ್ಯಾಂಕಿಗೆ ಬಂದಿದ್ದಾರೆ. ಇದನ್ನು ಕಂಡು ಬ್ಯಾಂಕ್ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.
ಹಣ ಪಡೆಯುವ ಸಲುವಾಗಿ ಗೌರಮ್ಮ ಜೀವಂತವಾಗಿರುವ ತನ್ನ ಮೊಮ್ಮಗಳು ಹಾಗೂ ಸೊಸೆಯ ಸುಳ್ಳು ಮರಣ ಪತ್ರ ಸೃಷ್ಟಿಸಿರುವುದು ಸಾರ್ವಜನಿಕರಿಗೂ ಅಚ್ಚರಿ ತರಿಸಿದೆ.