ಜನಜೀವನಕ್ಕೆ ಮಾರಣಾಂತಿಕವಾಗಿ ಪರಿಣಮಿಸಿರುವ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಇಂದಿನಿಂದ ಮೂರನೇ ಹಂತದ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 17ರವರೆಗೆ ಇದು ಮುಂದುವರಿಯಲಿದೆ.
ಇದರ ಮಧ್ಯೆ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ವಲಯಗಳಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ.
ಹಸಿರು ವಲಯದಲ್ಲಿ ವಿನಾಯಿತಿ ಜಾಸ್ತಿ ಇದ್ದು, ಕಿತ್ತಲೆ ಹಾಗೂ ಕೆಂಪು ವಲಯದಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಒಂದಷ್ಟು ವಿನಾಯಿತಿ ನೀಡಲಾಗಿದೆ. ಆದರೆ ಮೂರೂ ವಲಯಗಳಲ್ಲಿ ಈ ಸೇವೆಗಳನ್ನು ಮೇ 17ರ ವರೆಗೆ ಕಂಪ್ಲೀಟ್ ಬಂದ್ ಮಾಡಲಾಗಿದೆ.
ದೇಶಿಯ – ಅಂತರಾಷ್ಟ್ರೀಯ ವಿಮಾನ ಪ್ರಯಾಣ, ರೈಲು, ಸಾರ್ವಜನಿಕ ಸಾರಿಗೆ ಹಾಗೂ ಮೆಟ್ರೋ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಶಾಲಾ – ಕಾಲೇಜುಗಳು ಕೂಡಾ ಬಂದ್ ಆಗಿರಲಿವೆ.
ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ, ಬಾರ್ ಅಂಡ್ ರೆಸ್ಟೋರೆಂಟ್, ಎಲ್ಲಾ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆ ಮೇಲೆ ನಿಷೇಧ ಹೇರಲಾಗಿದ್ದು, ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.