ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೂ ಇದು ತಟ್ಟಿದೆ. ಈ ಮೊದಲು ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ಡೌನ್ ತೆರವುಗೊಂಡ ನಂತರ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಹೀಗಾಗಿ ಇಂದಿನಿಂದ ಅನಿರ್ದಿಷ್ಟ ಕಾಲದವರೆಗೆ ಮಧ್ಯಾಹ್ನದ ನಂತರ ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಜುಲೈ 16 ರ ಇಂದು ಮಧ್ಯಾಹ್ನ 2 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 5 ಗಂಟೆವರೆಗೆ ಪ್ರತಿನಿತ್ಯ ಅನಿರ್ದಿಷ್ಟ ದಿನಗಳ ಕಾಲದವರೆಗೆ ಈ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ.
ಮಧ್ಯಾಹ್ನ ನಂತರದ ಲಾಕ್ ಡೌನ್ ಅವಧಿಯಲ್ಲಿ ವೈದ್ಯಕೀಯ ಸೇವೆ ಕೈಗಾರಿಕೆಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಇನ್ನುಳಿದಂತೆ ಅಗತ್ಯ ಸಾಮಗ್ರಿಗಳನ್ನು ಸಾರ್ವಜನಿಕರು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಖರೀದಿಸಬಹುದಾಗಿದೆ. ಮದ್ಯ ಹಾಗೂ ಮಾಂಸ ಮಾರಾಟಕ್ಕೂ ಇದೇ ನಿಯಮ ಅನ್ವಯವಾಗಲಿದೆ.