ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಅನುಷ್ಠಾನಗೊಂಡಿದೆ.
ಇದರ ಮಧ್ಯೆ ಲಾಕ್ ಡೌನ್ ಸಡಿಲಿಕೆಗೊಂಡರೆ ಮದ್ಯದಂಗಡಿಗಳು ತೆರೆಯಬಹುದೆಂಬ ನಿರೀಕ್ಷೆಯಲ್ಲಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಮೊದಲನೆಯ ಲಾಕ್ ಡೌನ್ ಮುಗಿಯಲು ಬಂದ ಸಂದರ್ಭದಲ್ಲೇ ಮದ್ಯದಂಗಡಿಗಳು ತೆರೆಯಬಹುದೆಂಬ ನಿರೀಕ್ಷೆಯನ್ನು ಹೊಂದಲಾಗಿತ್ತು.
ಮದ್ಯ ಮಾರಾಟದಿಂದಲೇ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಆದಾಯ ಹರಿದು ಬರುವ ಕಾರಣ ಮದ್ಯದಂಗಡಿಗಳು ತೆರೆದೇ ತೆರೆಯುತ್ತವೆಂಬ ನಿರೀಕ್ಷೆಯಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು 2ನೇ ಬಾರಿ ಲಾಕ್ ಡೌನ್ ಘೋಷಿಸಿದ್ದು ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿದ್ದರು.
ಆ ನಂತರ ಲಾಕ್ ಡೌನ್ ಸಡಿಲಿಕೆ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯುವ ಆಸೆ ಗರಿಗೆದರಿತ್ತು. ಈಗ ಅದಕ್ಕೂ ಕಲ್ಲು ಬಿದ್ದಿದೆ. ಅಲ್ಲದೆ ಲಾಕ್ ಡೌನ್ ಪೂರ್ಣಗೊಳ್ಳುವ ಮೇ 3ರ ಬಳಿಕವೂ ಇದು ತೆರೆಯುವುದು ಅನುಮಾನ ಎನ್ನಲಾಗಿದೆ. ಮದ್ಯ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಎಂಬ ತಜ್ಞರ ಸಲಹೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.