ಶಿವಮೊಗ್ಗ: ಬಿಜೆಪಿಯಲ್ಲಿ ಯಾವುದೇ ರೀತಿಯ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ, ಗುಂಪುಗಾರಿಕೆಯೂ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, 9 ವಿಧಾನಪರಿಷತ್ ಹಾಗೂ 4 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಹಜವಾಗಿಯೇ ವಿವಿಧ ಸಮಾಜದವರು ತಮಗೆ ಟಿಕೆಟ್ ಕೊಡಿ ಎಂದು ಒತ್ತಡ ಮತ್ತು ಮನವಿ ಮಾಡುತ್ತಿದ್ದಾರೆಯೇ ವಿನಃ ಇದೇನೂ ಹೊಸದಲ್ಲ ಎಂದರು.
ಟಿವಿಯಲ್ಲಿ ಬರುತ್ತಿರುವ ಸಭೆಯ ದೃಶ್ಯಗಳು ತುಂಬಾ ಹಳೆಯದಾಗಿದೆ. ಹಾಗಾಗಿ ಯಾವ ಗುಂಪುಗಾರಿಕೆಯೂ ಬಿಜೆಪಿಯಲ್ಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಮಗೆ ಮಾತುಕೊಟ್ಟಂತೆ ಸಚಿವ ಸ್ಥಾನ ನೀಡಿದ್ದಾರೆ. ನಾವು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ ಮತ್ತು ಇನ್ನುಳಿದ ಮೂವರು ಅರ್ಹ ಶಾಸಕರಿಗೂ ಕೂಡ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ. ಎಲ್ಲವೂ ಸರಿಯಾಗಿದೆ ಎಂದರು.