ಹಸಿರು ವಲಯದಲ್ಲಿದ್ದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೂ ಈಗ ಕೊರೊನಾ ಮಹಾಮಾರಿ ವಕ್ಕರಿಸಿದೆ. ಮೊದಲಿಗೆ ಗುಜರಾತಿನ ಅಮದಾಬಾದ್ ನಿಂದ ಬಂದ 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಮುಂಬೈನ ಧಾರಾವಿಯಿಂದ ಆಗಮಿಸಿದ್ದ ತೀರ್ಥಹಳ್ಳಿ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಈ ವ್ಯಕ್ತಿ ಕಳ್ಳ ಮಾರ್ಗದಲ್ಲಿ ತೀರ್ಥಹಳ್ಳಿಗೆ ಬಂದಿದ್ದನೆಂದು ಹೇಳಲಾಗಿದ್ದು, ಈತನ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುವಂತಿದೆ. ಭದ್ರಾವತಿಯಿಂದ ಅಕ್ಕಿ ಚೀಲ ತೆಗೆದುಕೊಂಡು ಮಹಾರಾಷ್ಟ್ರಕ್ಕೆ ತೆರಳಿದ್ದ ಲಾರಿಯಲ್ಲಿ ಈತ ಬಂದಿದ್ದು, ಇದರಿಂದಾಗಿ ಲಾರಿ ಚಾಲಕ ಹಾಗೂ ಕ್ಲೀನರ್ ಸೋಂಕಿಗೊಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಹರಿಹರದವರೆಗೆ ಲಾರಿಯಲ್ಲಿ ಬಂದಿದ್ದ ಈತ ಅಲ್ಲಿಂದ ಚೆನ್ನಗಿರಿ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದಿದ್ದು, ಚನ್ನಗಿರಿಯಲ್ಲಿ ಊಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸ್ನೇಹಿತನ ಜೊತೆ ಕಾರಿನಲ್ಲಿ ತೆರಳಿದ್ದು, ಅಲ್ಲಿ ಹಲವರ ಸಂಪರ್ಕಕ್ಕೆ ಬಂದಿರುವ ಸಂದೇಹ ವ್ಯಕ್ತವಾಗಿದೆ.
ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದ ಕಾರಣ ತನಗೂ ಇದು ತಗುಲಿರಬಹುದಾ ಎಂಬ ಅನುಮಾನ ಹೊಂದಿದ್ದ ಈತ, ಆಸ್ಪತ್ರೆಗೆ ಹೋಗುವ ಬದಲು ದೇವಸ್ಥಾನವೊಂದಕ್ಕೆ ತೆರಳಿ ತನಗೆ ಕೊರೊನಾ ಬಂದಿದೆಯಾ ಎಂಬ ಪ್ರಶ್ನೆ ಕೇಳಿದ್ದ ಎನ್ನಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲಾಡಳಿತ ಈತನ ಸಂಪರ್ಕಕ್ಕೆ ಬಂದಿರುವವರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು ಕ್ವಾರಂಟೈನ್ ಮಾಡಲು ಮುಂದಾಗಿದೆ.