ಕೊರೋನಾ ಸೋಂಕಿನಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ತೀವ್ರ ಸಂಕಷ್ಟದಲ್ಲಿದ್ದ ಚಾಲಕರಿಗೆ ನೆರವಾಗಲು ರಾಜ್ಯ ಸರ್ಕಾರ 5 ಸಾವಿರ ರೂ. ಧನ ಸಹಾಯ ನೀಡಲು ಮುಂದಾಗಿದೆ.
ಈ ನೆರವು ಪಡೆಯಲು ಚಾಲನಾ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ ಸಾಕು ಎಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಸಾರಿಗೆ ಆಯುಕ್ತರು, ಕಾಂಗ್ರೆಸ್ ನಾಯಕರು ಹಾಗೂ ಚಾಲಕರ ಒಕ್ಕೂಟಗಳ ಪದಾಧಿಕಾರಿಗಳು ಸೇರಿ ಚರ್ಚೆ ನಡೆಸಿದರು. ಇದೇ ವೇಳೆ 5 ಸಾವಿರ ಹಣ ಪಡೆಯಲು ಚಾಲಕರಿಗೆ ಯಾವುದೇ ಹೆಚ್ಚು ಷರತ್ತು ಹಾಕದಂತೆ ಮನವಿ ಮಾಡಲಾಗಿತ್ತು.
ಈ ಮೊದಲು ಸರ್ಕಾರ 5 ಸಾವಿರ ರೂ. ಪಡೆಯಲು ಪ್ಯಾನ್ಕಾರ್ಡ್ ಮತ್ತು ವಾಹನದ ಫಿಟ್ ನೆಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಹೊಸ ನಿಯಮ ತೆಗೆದು ಹಾಕುವ ಮೂಲಕ ಚಾಲಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.