ʼಮೋರ್ʼ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾನೆಂಬ ಕಾರಣಕ್ಕೆ ಆತನನ್ನು ಕ್ವಾರಂಟೈನ್ ಮಾಡಲಾಗಿದ್ದು, ಇದು ಶಿವಮೊಗ್ಗ ನಗರದ ಜನತೆಗೆ ಆತಂಕವನ್ನುಂಟು ಮಾಡಿತ್ತು. ಇದೀಗ ಯುವಕನ ಗಂಟಲು ದ್ರವ ಪರೀಕ್ಷೆ ವರದಿ ಹೊರಬಿದ್ದಿದ್ದು, ನೆಗೆಟಿವ್ ಎಂದು ಹೇಳಲಾಗಿದೆ. ಇದರಿಂದಾಗಿ ಶಿವಮೊಗ್ಗ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ ಇದೀಗ ನೆಮ್ಮದಿ ಕದಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ತಮಿಳುನಾಡಿನಿಂದ ಕಳ್ಳದಾರಿಯಲ್ಲಿ ಆಟೋ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ 5 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಈಗ ಬೆಳಕಿಗೆ ಬಂದಿದೆ. ಈ ಐದು ಮಂದಿ ತುಂಗಾ ನಗರದ ತಮ್ಮ ಮನೆಗೆ ತೆರಳಿದ್ದರೆನ್ನಲಾಗಿದ್ದು, ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತುಂಗಾ ನಗರವನ್ನು ಈಗ ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗುತ್ತಿದೆ.
ಸೋಂಕು ದೃಢಪಟ್ಟಿರುವ ಐದು ಮಂದಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಪಟ್ಟಿ ತಯಾರಿಸಲಾಗುತ್ತಿದ್ದು, ಅವರುಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಆರಂಭದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳಿಲ್ಲದೆ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿತ್ತು. ಆದರೆ ಯಾವಾಗ ಲಾಕ್ ಡೌನ್ ಸಡಿಲಗೊಂಡು ಹೊರ ರಾಜ್ಯಗಳಿಂದ ಜನರು ಬರಲಾರಂಭಿಸಿದರೋ ಅಂದಿನಿಂದ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.