ವಿಜಯಪುರ: ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಪಕ್ಷೀಯ ಶಾಸಕರೇ ಗರಂ ಆಗಿದ್ದು, ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೆ ಒಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಾಪೂಜೆ, ದೀಪಾವಳಿಯಲ್ಲಿ. ಆದರೆ ಈ ಸಂದರ್ಭದಲ್ಲಿ ಇಕೋ ಫ್ರೆಂಡ್ಲಿ ಗಣೇಶ, ನಾಯ್ಸ್ ಲೆಸ್ ದೀಪಾವಳಿ ಮಾಡಿ ಎಂದು ಬೋಧನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಾವು ಪರಿಸರ ಸ್ನೇಹಿ ಗಣೇಶೋತ್ಸವ, ಶಬ್ದರಹಿತ ದೀಪಾವಳಿ ಮಾಡಬೇಕು ಎನ್ನುವುದಾದರೆ ನಾಯ್ಸ್ ಲೆಸ್ ಫ್ರೈಡೆ, ಬ್ಲಡ್ ಲೆಸ್ ಬಕ್ರೀದ್, ಕ್ರ್ಯಾಕರ್ಲೆಸ್ ಡಿಸೆಂಬರ್ 31 ಇವೆಲ್ಲವುಗಳನ್ನು ಮಾಡಬೇಕು ಎಂದಿದ್ದಾರೆ.
ಬೀದಿಯಲ್ಲಿ ಪಟಾಕಿ ಹೊಡೆಯುವುದು ಬೇಡ, ನಾವು ಮನೆಯಲ್ಲಿ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಹಚ್ಚದೇ ನಮಾಜು ಮಾಡಲಿ. ಧ್ವನಿವರ್ಧಕಗಳ ಮೂಲಕ ಕೂಗುವುದು, ರಸ್ತೆಯಲ್ಲಿ ನಮಾಜು ಮಾಡುವುದು, ಡಿಸೆಂಬರ್ 31ರ ರಾತ್ರಿ ಪಟಾಕಿ ಹಚ್ಚಿ ಸಂಭ್ರಮಿಸುವುದು ಇದಾವೂದು ಬೇಡ ಎಂದು ಹೇಳುವ ಮೂಲಕ ಕಿಡಿಕಾರಿದ್ದಾರೆ.