ಲಾಕ್ಡೌನ್ನಿಂದಾಗಿ ಕಂಪನಿಗಳು ಮುಚ್ಚಿವೆ. ಆದರೆ ಷರತ್ತು ಬದ್ದವಾಗಿ ಕಂಪನಿಗಳನ್ನು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. 50 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆ ಇದ್ದವರು ಕೆಲಸಕ್ಕೆ ಹೋಗುವಂತಿಲ್ಲ ಎಂದು ಹೇಳಲಾಗಿದೆ. ಇದೀಗ ಕಂಪನಿಗಳನ್ನು ತೆರೆಯಲಾಗಿದ್ದು, ಕಂಪನಿಗೆ ಬರುವವರು ಕಡ್ಡಾಯವಾಗಿ ಆರೋಗ್ಯ ದೃಢೀಕರಣ ಪತ್ರ ತರಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ನೌಕರರು ಹೋಗಿ ಆರೋಗ್ಯ ದೃಢೀಕರಣ ಪತ್ರಕ್ಕಾಗಿ ಆರೋಗ್ಯ ತಪಾಸಣೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಇವರಿಗೆ ದೃಢೀಕರಣ ಪತ್ರ ನೀಡುವ ಹಿನ್ನೆಲೆ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿತ್ತು. ಇದನ್ನರಿತ ಸರ್ಕಾರ ಸೂಚನೆ ನೀಡಿದೆ. ಪ್ರಾಥಮಿಕ ಮತ್ತು ಆರೋಗ್ಯ ಕುಟುಂಬ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರದ ಸೂಚನೆಯಂತೆ ಯಾವುದೇ ನೌಕರರಿಗೆ ಆರೋಗ್ಯ ದೃಢೀಕರಣ ಪತ್ರ ಕಡ್ಡಾಯವಲ್ಲ. ಈ ಪತ್ರ ತರುವಂತೆ ನೌಕರರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಕಂಪನಿಗಳಿಗೆ ಸೂಚನೆಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ಹಾಗೂ ಕ್ವಾರಂಟೀನ್ ಗೆ ಒಳಗಾದ ಅಥವಾ ಸೋಂಕು ತಗುಲಿದ ಶಂಕಿತ ವ್ಯಕ್ತಿ ಎಂದು ಗುರುತಿಸಿದವರನ್ನು ಹೊರತುಪಡಿಸಿ ರಾಜ್ಯದ ಯಾವುದೇ ವ್ಯಕ್ತಿಯೂ ಕೊರೊನಾ ಚಿಕಿತ್ಸೆಗೆ ಒಳಪಡಿಸಬಾರದು. ಕಾನೂನು ಉಲ್ಲಂಘಿಸಿ ದೃಢೀಕರಣ ಪತ್ರ ನೀಡಿದ್ದಲ್ಲಿ ಅಂತವರು ಹಾಗೂ ಕಂಪನಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.