ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದು, ಮೂರನೇ ಹಂತದ ಲಾಕ್ ಡೌನ್ ಮೇ 17 ರಂದು ಅಂತ್ಯಗೊಳ್ಳಲಿದೆ.
ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಅಂಗಡಿ – ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಕ್ಷೌರದಂಗಡಿಗಳು ಸಹ ಈ ಪಟ್ಟಿಯಲ್ಲಿದ್ದವು. ಇದರಿಂದಾಗಿ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಕಟ್ಟಿಂಗ್, ಶೇವಿಂಗ್ ಮಾಡಿಸಲು ಸಾಧ್ಯವಾಗದೆ ಕಂಗೆಟ್ಟಿದ್ದರು.
ಕೆಲವರು ಸ್ವಯಂ ಕ್ಷೌರ ಮಾಡಿಕೊಳ್ಳಲು ಯಶಸ್ವಿಯಾದರೆ ಮತ್ತೆ ಹಲವರು ಕ್ಷೌರ ಮಾಡಿಕೊಳ್ಳಲು ಹೋಗಿ ಎಡವಟ್ಟಾದ ಪರಿಣಾಮ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿಯಲ್ಲಿದ್ದರು. ಇದೀಗ ಕೇಂದ್ರ ಸರ್ಕಾರ ಹಸಿರು ಹಾಗೂ ಕಿತ್ತಲೆ ವಲಯಗಳಲ್ಲಿ ಕ್ಷೌರದಂಗಡಿ ತೆರೆಯಲು ಅನುಮತಿ ನೀಡಿದ್ದು, ಇದರಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.