ಯಾರಿಗಾದರೂ ಕೊರೊನಾ ಸೋಂಕು ವಕ್ಕರಿಸಿದೆ ಎಂದರೆ ಬೆಚ್ಚಿ ಬೀಳುತ್ತಾರೆ. ಕೆಲವರು ಹೆದರಿಕೆಯಿಂದಲೇ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಕೊರೊನಾ ಸೋಂಕಿನಿಂದ ಗುಣಮುಖನಾದರೂ ಈಗ ಮತ್ತೊಂದು ಸಂಕಷ್ಟ ಎದುರಾಗಿರುವುದರಿಂದ ಪರದಾಡುವಂತಾಗಿದೆ.
ಹೌದು, ಇಂತಹುದೊಂದು ಪರಿಸ್ಥಿತಿ ಕೊಪ್ಪಳದ 25ವರ್ಷದ ಯುವಕನಿಗೆ ಎದುರಾಗಿದ್ದು, ತಮಿಳುನಾಡಿನಿಂದ ಆಗಮಿಸಿದ್ದ ಈತನಿಗೆ ಟೆಸ್ಟ್ ಮಾಡಿದ ವೇಳೆ ಪಾಸಿಟಿವ್ ಬಂದಿತ್ತು. ಹೀಗಾಗಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಗುಣಮುಖನಾಗಿದ್ದಾನೆ. ಆತನನ್ನು ಮನೆಗೆ ಕಳುಹಿಸಿಕೊಡುವ ವೇಳೆ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಹಣ್ಣು ನೀಡಿದ್ದಾರೆ.
ಆದರೆ ತಾನು ಗುಣಮುಖನಾಗಿದ್ದೇನೆ ಎಂಬ ಕಾರಣಕ್ಕೆ ಖುಷಿಪಡಬೇಕಿದ್ದ ಯುವಕ ಮಂಕಾಗಿದ್ದಾನೆ. ಈತನನ್ನು ಮನೆಗೆ ಸೇರಿಸಿಕೊಳ್ಳಲು ಪೋಷಕರು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ. ಯುವಕನ ಕುಟುಂಬದವರು ಬಾಡಿಗೆ ಮನೆಯಲ್ಲಿದ್ದಾರಂತೆ. ಹೀಗಾಗಿ ಅಕ್ಕಪಕ್ಕದ ನಿವಾಸಿಗಳು ಆತನನ್ನು ಸದ್ಯಕ್ಕೆ ಮನೆಗೆ ಕರೆದುಕೊಂಡು ಬಾರದಂತೆ ಕುಟುಂಬಸ್ಥರ ಮೇಲೆ ಒತ್ತಡ ಹೇರುತ್ತಿದ್ದಾರಂತೆ.
ಹೀಗಾಗಿ ಯುವಕನ ಪೋಷಕರು ಆತನನ್ನು ಮನೆಗೆ ಕರೆದುಕೊಂಡು ಹೋಗಲು ಮೀನಾಮೇಷ ಎಣಿಸುತ್ತಿದ್ದು, ಯುವಕ ಗುಣಮುಖನಾದರೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವಂತಾಗಿದೆ. ಇದೀಗ ಅಧಿಕಾರಿಗಳು ಯುವಕನ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ನಿವಾಸಿಗಳ ಮನವೊಲಿಸಿ ಆತನನ್ನು ಮನೆಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ.