ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇನ್ನೂ ಎರಡು ವಾರ ಕೇಂದ್ರ ಸರ್ಕಾರ ಲಾಕ್ ಡೌನ್ ವಿಸ್ತರಿಸಿದೆ. ಲಾಕ್ ಡೌನ್ ವಿಸ್ತರಣೆ ನಂತ್ರ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪ್ರಕಾರ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಪ್ರಕಾರ, ಅಂತರ್ ರಾಜ್ಯ ಜಿಲ್ಲಾ ಪ್ರವಾಸಕ್ಕೆ ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ. ಲಾಕ್ ಡೌನ್ ವೇಳೆ ಊರಿನಲ್ಲಿ ಅಥವಾ ಬೆಂಗಳೂರಿನಲ್ಲಿ ಸಿಕ್ಕಿಬಿದ್ದವರಿಗೆ ಪಾಸ್ ನೀಡಲಾಗ್ತಿದೆ. ಒಂದು ದಿನಕ್ಕೆ ಒಂದು ಬಾರಿ ಪ್ರಯಾಣ ಬೆಳೆಸಲು ಮಾತ್ರ ಪಾಸ್ ನೀಡಲಾಗ್ತಿದೆ. ಲಾಕ್ ಡೌನ್ ವೇಳೆ ಸಿಲುಕಿದವರು ಪಾಸ್ ಪಡೆಯಬಹುದು, ಊರಿಗೆ ಅಥವಾ ಕೆಲಸದ ಸ್ಥಳಕ್ಕೆ ತೆರಳಲು ಪಾಸ್ ನೀಡಲಾಗುತ್ತದೆ.
ಕೆಂಪು ವಲಯದಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಶಾಲಾ-ಕಾಲೇಜು, ಜಿಮ್, ಮಾಲ್, ಸಿನಿಮಾ ಥಿಯೇಟರ್ ಸೇರಿದಂತೆ ಎಲ್ಲವೂ ಬಂದ್ ಇರಲಿದೆ. ಬಿಎಂಟಿಸಿ, ಕ್ಯಾಬ್, ಮೆಟ್ರೋ ಸೇವೆ ಕೂಡ ಬಂದ್ ಇರಲಿದೆ. ಆದ್ರೆ ಹಸಿರು ವಲಯದಲ್ಲಿ ಸಾಕಷ್ಟು ವಿನಾಯಿತಿ ನೀಡಲಾಗಿದೆ. ಇಲ್ಲಿ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೆಂಪು ವಲಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಉಪ ಕಾರ್ಯದರ್ಶಿ ಹುದ್ದೆಯಿಂದ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ಕಚೇರಿಗೆ ಬಂದು ಕೆಲಸ ಮಾಡಬಹುದು ಎನ್ನಲಾಗಿದೆ. ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ನೀಡಲಾಗ್ತಿದೆ. ಶೇಕಡಾ 33ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿದೆ.
ಇಷ್ಟೇ ಅಲ್ಲ ಬೈಕ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಬೈಕ್ ನಲ್ಲಿ ಒಬ್ಬರು ಮಾತ್ರ ಸಂಚರಿಸಬೇಕು. ಇನ್ನು ಕಾರಿನಲ್ಲಿ ಪ್ರಯಾಣ ಬೆಳೆಸಲು ಮೂವರಿಗೆ ಅವಕಾಶ ನೀಡಲಾಗಿದೆ. ಚಾಲಕ ಸೇರಿ ಮೂವರು ಮಾತ್ರ ಕಾರಿನಲ್ಲಿ ಪ್ರಯಾಣ ಬೆಳೆಸಬೇಕೆಂದು ಹೇಳಲಾಗಿದೆ.
ಖಾಸಗಿ ಆಸ್ಪತ್ರೆ ಒಪಿಡಿ ತೆರೆಯಲು ಅವಕಾಶ ನೀಡಲಾಗಿದೆ. ಅಗತ್ಯವಲ್ಲದ ಉದ್ದೇಶಕ್ಕೆ ವೃದ್ಧರು, ಮಕ್ಕಳು ಸೇರಿದಂತೆ ಗರ್ಭಿಣಿಯರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಓಡಾಟವನ್ನು ನಿಷೇಧಿಸಲಾಗಿದೆ.